Tuesday, 27 December 2016

Best lines


Best lines.

#
ಗೆಲುವು ಅಂದರೆ ಸೋಲದೇ ಇರೋದಲ್ಲ... ಜೀವನದಲ್ಲಿ ಬರುವ ಸಮಸ್ಯೆಗಳನ್ನು ಸಮಪ೯ಕವಾಗಿ ಎದುರಿಸುತ್ತಾ ಬದುಕೋದು....
    
#
ನಾವು ತುಂಬಾ ಪ್ರೀತಿಸುವ ನಮ್ಮಿ೦ದ ಬಿಟ್ಟಿರಲಾಗದ ಸಂಬಂಧಗಳನ್ನ ಉಳಿಸಿಕೊಳ್ಳಲು ಹೊಂದಿಕೊಂಡು ಬದುಕಬೇಕು ಒಂದು ವೇಳೆ ಸಾಧ್ಯವಿಲ್ಲವಾದಾಗ ನಾವಾಗೆ ಬದುಕುವುದು ಒಳ್ಳೆಯದು.

#
ನಮ್ಮ ಹೊಟ್ಟೆ ತುಂಬಿದ್ದಾಗ ಇತರರ ಹಸಿವು ತಿಳಿಯಲ್ಲ ನಾವು ಕುಶೀಲಿದ್ದಾಗ ಅವರ ದುಃಖ ಕಾಣಲ್ಲ ಆದ್ರೆ...ನಮ್ಮ ಹಸಿವು ಕಷ್ಟ ಇತರರಿಗೆ ಅಥ೯ ಆಗ್ತಿಲ್ಲಂತ ಬೇಜಾರು ಮಾಡ್ಕೋತೀವಿ

#
ಸಮಯ ಕೆಲವರನ್ನ ಕಾಯಿಸುತ್ತಂತೆ ಇನ್ನು ಕೆಲವರನ್ನ ಪರೀಕ್ಷಿಸುತ್ತಂತೆ ಮತ್ತೆ ಕೆಲವರನ್ನು ಮೆರೆಸುತ್ತಂತೆ ಕೆಲವರನ್ನು ಸಮಾಧಾನಿಸುತ್ತಂತೆ ಕೆಲವರನ್ನು ಮಾತ್ರ ನಗಿಸುತ್ತಂತೆ.

#
ಲೋಕದಲ್ಲಿ ಹುಟ್ಟಿದ ಬಳಿಕ ಸ್ತುತಿ ನಿಂದನೆಗಳು ಬಂದರೆ ಮನದಲಿ ಕೋಪವ ತಾಳದೇ... ಸಮಾಧಾನಿಯಾಗಿರಬೇಕು. - ಅಕ್ಕಮಹಾದೇವಿ

#
ಪರಸ್ಪರ ರಹಸ್ಯವಿರದ ಪಾರದಶ೯ಕ ಸಂಬಂಧ ಮಾತ್ರ ಗಟ್ಟಿಯಾಗಿರುತ್ತೆ ಅನ್ನೋದು ನಿಜವಾದರೂ ಕೆಲವರು ಸಂಬಂಧವನ್ನ ಉಳಿಸಿಕೊಳ್ಳಕ್ಕಾಗಿ ಗುಟ್ಟನ್ನ ಮುಚ್ಚಿಡೋಕೆ ಹೆಣಗಾಡ್ತನೇ ಇರೋದು

#
ನಮಗೆ ಬಂದೆರುಗುವ ಸಂಕಷ್ಟದ ಪರಿಸ್ಥಿತಿಗಳಿಗೆ ಯಾರ ಶಾಪವೂ ಕಾರಣವಲ್ಲ ಯಾವ ದೇವರ ಕೋಪವೂ ಅಲ್ಲ ಕೋಪದ ಆವೇಶದಲ್ಲಿ ಅಮಾಯಕ ಮನಸುಗಳಿಗೆ ನೋವಾಗುವಂತೆ ನಾವೇ ಹಾಕಿದ ಶಾಪದ ಪಾಪ..

#
ನಿಂತರೆ ಕೇಳುವರು ನೀನೇಕೆ ನಿಂತೆ..? ಮಲಗಿದರೆ ಗೊಣಗುವರು ನಿನಗಿಲ್ಲ ಚಿಂತೆ..! ಓಡಿದರೆ ಬೆನ್ನ ಹಿಂದೆಯೇ ಇವರ ಟೀಕೆ, ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ -ಕೆ.ಎಸ್.ನ

#
ನಮ್ಮನ್ನ ನಂಬಿದವರ ಅಸಹಾಯಕ ಪರಿಸ್ಥಿತಿಯನ್ನು ಅವಮಾನಿಸಿ ಅವರ ಅವಶ್ಯಕತೆಯೇ ಇಲ್ಲವೆಂಬಂತೆ ಹೀಯಾಳಿಸಿರುತ್ತೇವೆ ಆದರೆ ನಮ್ಮ ತಪ್ಪು ಅರಿವಾಗುವಷ್ಟರಲ್ಲಿ ಕಾಲ ಮಿಂಚಿರುತ್ತದೆ

#
ಅಸಹಾಯಕತೆ ಅನ್ನೋದು ನಮ್ಮನ್ನು ಎಷ್ಟು ದುಬ೯ಲರನ್ನಾಗಿ ಮಾಡುತ್ತೇ೦ದ್ರೆ ಎಲ್ಲಾ ಇದ್ರೂ ಉಪಯೋಗಕ್ಕೆ ಬರಲ್ಲ ನಮ್ಮವರೂಂತ ಯಾರೂ ಇರಲ್ಲ ನಮ್ಮ ಯಾರಿಗೂ ಪರಿಸ್ಥಿತಿ ಅಥ೯ಆಗಲ್ಲ

#
ಓದಲು ಕಲಿತು ಪುಸ್ತಕ ಓದದವರಿಗೂ ಓದಲು ಬರದ ಅನಕ್ಷರಸ್ಥರಿಗೂ ವ್ಯತ್ಯಾಸವಿಲ್ಲ ನಾಲ್ಕು ಅಕ್ಷರ ಕಲಿತವರು ನಾಲ್ಕು ಪುಸ್ತಕಗಳನ್ನಾದರೂ ಓದಿದರೆ ನಾಲ್ಕು ದೇಶ ಸುತ್ತಿದಂತೆ...

#
ನಿನ್ನಂತೆ ನೀನಾಗು ನಿನ್ನನೀನರಿ ಮೊದಲು ಚನ್ನೆಂದು ದೊಡ್ಡವರ ಅನುಕರಿಸಬೇಡ ಏನಾಯ್ತು ಮರಿಕತ್ತೆ ? ಚನ್ನಿತ್ತು ಮುದ್ದಿತ್ತು ತನ್ನಪ್ಪನಂತಾಗಿ ಹಾಳಾಯ್ತೊ ತಿಂಮ - ಬೀChi

#
ನಾವಾಡುವ ಮಾತು ನಾವ್ಯಾರೆಂದು ಹೇಳುತ್ತೆ ನಾವು ಯಾರ ಮುಂದೆ ಹೇಗೆ ಮಾತಾಡುತ್ತೇವೆ ಅನ್ನೋದು ನಮ್ಮ ಸಂಸ್ಕಾರವನ್ನು ತಿಳಿಸುತ್ತೆ ನಮ್ಮ ಮಾತಿನ ರೀತಿಯೇ ನಮ್ಮ ವ್ಯಕ್ತಿತ್ವ

#
ಇನ್ನೊಬ್ಬರ ಮೆಚ್ಚುಗೆಗಾಗೋ... ಅಥವಾ... ನಮ್ಮ ಆತ್ಮರತಿಗೋ... ನಾವಾಡುವ ಮಾತುಗಳು... ನಮ್ಮ ನಡವಳಿಕೆಯಲ್ಲೂ... ಇದ್ದರೆ ಮಾತ್ರ ಆ ಮಾತುಗಳಿಗೆ ಪ್ರಾಮುಖ್ಯತೆ ಬರುತ್ತದೆ.

#
ಲೋಕದ ಡೊಂಕ ನೀವೇಕೆ ತಿದ್ದುವಿರಿ ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ ನೆರೆಮನೆಯ ದುಃಖಕ್ಕೆ ಅಳುವವರ ಮೆಚ್ಚ ಕೂಡಲಸಂಗಮ ದೇವ. - ಬಸವಣ್ಣ

#
ಆಡದಲೆ ಮಾಡುವವನು ರೂಡಿಯೊಳಗುತ್ತಮನು ಆಡಿ ಮಾಡುವವನು ಮಧ್ಯಮನು ಅಧಮ ತಾನಾಡಿಯೂ ಮಾಡದವನು - ಸವ೯ಜ್ಞ

#
ಎಲ್ಲರನ್ನು ಯಾವಾಗಲೂ ಸುಳ್ಳು ಹೇಳಿ ನಂಬಿಸಬಹುರು ಅಂತ ಅನ್ಕೊಂಡರೆ ಅದು ಸುಳ್ಳು... ಒಂದು ಸಲ ಹೇಳುತ್ತಿರೋದು ಸುಳ್ಳು ಅಂತ ಗೊತ್ತಾದ್ರೇ... ನಿಜ ಹೇಳಿದ್ರೂ ಯಾರೂ ನಂಬಲ್ಲ.

#
ನಿದ್ದೆಯಲ್ಲೂ ಬೆಚ್ಚಿ ಬೀಳ್ತೀವಿ ಅಂದ್ರೆ ನಮ್ಮವರಿಂದ ಏನನ್ನೋ ಮುಚ್ಚಿಟ್ಟಿರ್ತೀವಿ ಪ್ರಜ್ಞಾವಸ್ಥೆಯಲ್ಲಿ ಬಚ್ಚಿಟ್ಟ ಗುಟ್ಟು ನಿದ್ರಾವಸ್ಥೆಯಲ್ಲಿ ದುಃಸ್ವಪ್ನವಾಗುತ್ತೆ...

#
ನಾವು ತೆಗೆದುಕೊಳ್ಳುವ ನಿಧಾ೯ರಗಳಲ್ಲಿ ನಿಖರತೆ ಇರಬೇಕು ಪದೇ ಪದೇ ನಮ್ಮ ತೀಮಾ೯ನಗಳು ಬದಲಾಗುತ್ತಿದ್ದರೆ ಇತರರಿಗೆ ನಮ್ಮ ಬಗ್ಗೆ ಬೇರೆಯದೇ ಅಭಿಪ್ರಾಯ ಬರುವ ಅಪಾಯವಿರುತ್ತದೆ.

#
ಯಾರ ಮಾತೂ ನಿಜ ಅಲ್ಲ ಯಾರ ಮಾತೂ ಸುಳ್ಳಲ್ಲ ಎಲ್ಲವೂ ಅನುಕೂಲಕ್ಕೆ ತಕ್ಕಂತೆ ಅವರವರ ಅಭಿಪ್ರಾಯ ಅಷ್ಟೇ. ಅವರು ಹೇಗೆ ಸಮಥಿ೯ಸಿಕೊಳ್ಳುತ್ತಾರೋ ಅದರ ಮೇಲೆ ನಿಧಾ೯ರವಾಗುತ್ತೆ...

Sunday, 6 March 2016

ಮಹಾ ಶಿವರಾತ್ರಿ

ಮಹಾಶಿವರಾತ್ರಿಯು ಹಿಂದೂಗಳ ಹಬ್ಬಗಳಲೆಲ್ಲಾ ಪ್ರಮುಖವಾಗಿದೆ. ಮಹಾ ಶಿವರಾತ್ರಿ ಹಬ್ಬವನ್ನು ಮಾಘ ಮಾಸದ ಬಹುಳ/ಕೃಷ್ಣ ಪಕ್ಷದಲ್ಲಿ ಚತುರ್ದಶಿಯಂದು ಆಚರಿಸಲಾಗುತ್ತದೆ. ಚತುರ್ದಶಿ ತಿಥಿಯು ರಾತ್ರಿಯಲ್ಲಿ ಇರಬೇಕು. ಮಾಹಾ ಶಿವರಾತ್ರಿಯನ್ನು ಶಿವ ಭಕ್ತರು ಕಳೆಯುವ ರೀತಿ ಅನನ್ಯವಾದುದು. ಮಹಾಶಿವರಾತ್ರಿ ಹಬ್ಬವು ಬಹಳ ಮಟ್ಟಿಗೆ ಇತರ ಎಲ್ಲಾ ಹಬ್ಬಗಳಿಗಿಂತ ಭಿನ್ನವಾದುದಾಗಿದೆ. ಏಕೆಂದರೆ, ಅಂದು ಭಕ್ಷ್ಯ- ಭೋಜ್ಯ ಗಳನ್ನು ತಯಾರಿಸಲಾಗುವುದಿಲ್ಲ. ಉಪವಾಸ ವ್ರತವನ್ನು ಕಟ್ಟು ನಿಟ್ಟಾಗಿ ಪಾಲಿಸಲಾಗುವುದು. ಮನಸ್ಸನ್ನು ಭಕ್ಷ್ಯ-ಭೋಜ್ಯಗಳೆಡೆ, ಅನಗತ್ಯ ವೈಭವದ ಕಡೆ ಹರಿಸದೆ ದೃಢ ನಿರ್ಧಾರದಿಂದ ಶಿವನ ಪೂಜೆ- ಪುರಸ್ಕಾರಗಳನ್ನು ಕೈಗೊಂಡು ಆಚಾರಶೀಲರಾಗಿ ಸೇವೆ ಗೈಯಲಾಗುವುದು. ಇಡೀ ರಾತ್ರಿ ಸ್ವಲ್ಪವೂ ನಿದ್ದೆ ಮಾಡದೆ ಶಿವ ಧ್ಯಾನದಲ್ಲಿ ತಲ್ಲೀನರಾಗಿ ಕಾಲದ ಸದ್ಬಳಕೆ ಮಾಡುವುದು.

ಮಹಾ ಶಿವರಾತ್ರಿ ದಿನದಂದು ಮಾಡಬೇಕಾದು ಪೂಜಾ ವಿಧಿವಿಧಾನ ಹೀಗಿದೆ...

ಬೇಕಾದ ಪೂಜಾ ಸಾಮಾಗ್ರಿಗಳು...

ರಂಗೋಲಿ, ಮಣೆ, ಮಂಟಪ, ದೇವರ ವಿಗ್ರಹ ಅಥ ದೇವರ ಪಟ, ನಂದಾ ದೀಪ, ದೀಪದ ಕಂಭ, ತುಪ್ಪ, ಎಣ್ಣೆ, ದೀಪಕ್ಕೆ ಹಾಕುವ ಹತ್ತಿ ಬತ್ತಿ, ಘಂಟೆ, ಪಂಚಪಾತ್ರೆ, ಉದ್ದರಣೆ, ಅರ್ಘ್ಯ ಪಾತ್ರೆ, ನೀರು, ಅರಿಶಿನ, ಕುಂಕುಮ, ಮಂತ್ರಾಕ್ಷತೆ, ಶ್ರೀಗಂಧ, ಊದಿನ ಕಡ್ಡಿ, ವಿಭೂತಿ, ಹೂವು, ಬಿಲ್ವ ಪತ್ರೆ, ಗೆಜ್ಜೆ ವಸ್ತ್ರ, ಪಂಚಾಮೃತ- (ಹಾಲು, ಮೊಸರು, ಸಕ್ಕರೆ, ತುಪ್ಪ, ಜೇನುತುಪ್ಪ) ವೀಳ್ಯದ ಎಲೆ, ಅಡಿಕೆ, ಹಣ್ಣು, ತೆಂಗಿನ ಕಾಯಿ ನೈವೇದ್ಯ(ಪಾಯಸ, ಅಕ್ಕಿ ತಂಬಿಟ್ಟು ಇತ್ಯಾದಿ) ಕರ್ಪೂರ, ಆರತಿ ತಟ್ಟೆ, ಹೂಬತ್ತಿ, 

ಮಹಾ ಶಿವರಾತ್ರಿ ದಿನ ಬೆಳಿಗ್ಗೆ ಮಂಗಳ ಸ್ನಾನ ಮಾಡಿ, ಈಶ್ವರನಿಗೆ ಷೋಡಶೋಪಚಾರದಿಂದ ಪೂಜೆಮಾಡಬೇಕು. ಈ ದಿನದ ವಿಶೇಷ ಪೂಜಾ ಸಾಮಾಗ್ರಿ ಬಿಲ್ವ ಪತ್ರೆ. ಬಿಲ್ವ ಪತ್ರೆ ಈಶ್ವರನಿಗೆ ಪ್ರಿಯವಾದುದ್ದು. ಇದರ ಒಂದು ಎಲೆಯನ್ನು ಶಿವನಿಗೆ ಅರ್ಪಿಸಿದರೂ ನಾನಾ ಪುಣ್ಯಗಳಿಗೆ ಪಾತ್ರರಗುತ್ತೀವಿ ಎಂಬ ನಂಬಿಕೆ ಇದೆ. ಶಿವಲಿಂಗಕ್ಕೆ ಪಂಚಾಮೃತ ಮತ್ತು ಬಿಲ್ವ ಪತ್ರೆ ಸಮರ್ಪಣೆ ಮಾಡುತ್ತಾರೆ. ಸಾಮಾನ್ಯವಾಗಿ ಇಡೀ ದಿನ ಉಪವಾಸವಿದ್ದು, ರಾತ್ರಿ ಜಾಗರಣೆ ಮಾಡಿ ಮಾರನೆಯ ದಿನ ಪಾರಣೆ ಮಾಡಬೇಕು. ಉಪವಾಸ ಮಾಡಲು ಆಗದಿದ್ದರೆ, ಫಲಹಾರ ತೆಗೆದುಕೊಳ್ಳಬಹುದು. 

ಮೊದಲು ಸಂಕಲ್ಪ ಮಾಡಿ, ನಂತರ ಧ್ಯಾನ ಮಾಡಿ ದೇವರನ್ನು ಆಹ್ವಾನ ಮಾಡಬೇಕು.

ಸಂಕಲ್ಪ ಅಂದರೆ ನಿರ್ಧಾರ, ನಿರ್ಣಯ ಅಥವಾ ಚಿತ್ತ ಎಂದು. ಈ ದಿನ ಶಿವರಾತ್ರಿ ಪೂಜೆ ಮಾಡುತ್ತ ಇದ್ದೀನಿ ಅಂತ ನಿರ್ಧಾರ ಮಾಡುವುದನ್ನು ಸಂಕಲ್ಪ ಎಂದು ಹೇಳಲಾಗುತ್ತದೆ. 

ಧ್ಯಾನ - ಶಿವನನ್ನು ಭಕ್ತಿಯಿಂದ ಧ್ಯಾನ ಮಾಡಿ ಆಹ್ವಾನ ಮಾಡುವುದು.

ಷೋಡಶೋಪಚಾರದಿಂದ ಪೂಜೆ ಅರ್ಥ ಹೀಗಿದೆ.  ಷೋಡಶ ಅಂದರೆ 16. ಹದಿನಾರು ಬಗೆಯಿಂದ ಶಿವನಿಗೆ ಉಪಚಾರ ಮಾಡಿ ಎಂದರ್ಥ. ಆ 16 ಬಗೆ ಹೀಗಿದೆ...

1. ಆವಾಹನೆ - ಅಂದರೆ ಆಹ್ವಾನ . ದೇವರನ್ನು ನಿಮ್ಮ ಮನೆಗೆ ಅಥವಾ ಪೂಜೆ ಮಾಡುತ್ತಿರುವ ಜಾಗಕ್ಕೆ ಆಹ್ವಾನ ಮಾಡುವುದು.

2. ಆಸನ- ಅಂದರೆ ಕುಳಿತುಕೊಳ್ಳುವ ಜಾಗ. ಶಿವಲಿಂಗ ಅಥವ ಶಿವ ಪ್ರತಿಮೆಯನ್ನು ಇಡುವ ವೇದಿಕೆ/ ಮಣೆ ಮೇಲೆ ಆಸೀನ ಮಾಡಿಸುವುದು. 

3. ಪಾದ್ಯ ಅಂದರೆ ಕಾಲು ತೊಳೆದುಕೊಳ್ಳುವುದಕ್ಕೆ ನೀರು ಕೊಡುವುದು. 

4. ಅರ್ಘ್ಯ- ಕೈ ತೊಳೆದುಕೊಳ್ಳುವುದಕ್ಕೆ ನೀರು ಕೊಡುವುದು. 

5. ಆಚಮನ- ಕುಡಿಯುವುದಕ್ಕೆ ನೀರು ಕೊಡುವುದು. 

6. ಸ್ನಾನ- ನೀರು ಮತ್ತು ಪಂಚಾಮೃತದಿಂದ ಸ್ನಾನ ಮಾಡಿಸುವುದು. 

7. ವಸ್ತ್ರ- ದೇವರಿಗೆ ಉಡುಪು ಧರಿಸುವುದು. ಗೆಜ್ಜೆ ವಸ್ತ್ರಗಳನ್ನು ದೇವರಿಗೆ ಇಡುವುದು. 

8. ಹರಿದ್ರ, ಕುಂಕುಮ, ಗಂಧ, ಅಕ್ಷತ - ಅರಿಶಿನ , ಕುಂಕುಮ, ಶ್ರೀಗಂಧ , ಮಂತ್ರಾಕ್ಷತೆಯನ್ನು ದೇವರಿಗೆ ಅರ್ಪಿಸುವುದು.

9. ಪುಷ್ಪ ಮಾಲ- ಹೂವು, ಬಿಲ್ವ ಪತ್ರೆಗಳಿಂದ ದೇವರಿಗೆ ಅಲಂಕಾರ ಮಾಡುವುದು. 

10. ಅರ್ಚನೆ/ಅಷ್ಟೋತ್ತರ- ನೂರೆಂಟು ನಾಮಗಳಿಂದ ದೇವರನ್ನು ಸ್ಮರಣೆ ಮಾಡುವುದು

11. ಧೂಪ- ಪರಿಮಳಯುಕ್ತವಾದ ಧೂಪವನ್ನು ಅರ್ಪಿಸುವುದು

12. ದೀಪ- ದೇವರ ಮುಂದೆ ದೀಪ ಬೆಳಗಿಸುವುದು

13. ನೈವೇದ್ಯ, ತಾಂಬೂಲ- ದೇವರಿಗೆ ವಿಧ ವಿಧ ಭಕ್ಷ್ಯಗಳನ್ನು ಅರ್ಪಿಸುವುದು. ವೀಳೆಯ, ಅಡಿಕೆ, ತೆಂಗಿನ ಕಾಯಿ ತಾಂಬೂಲ ಇಡಬೇಕು. ಫಲಗಳನ್ನು ದೇವರ ಮುಂದೆ ಇಡಬೇಕು. 

14. ನೀರಾಜನ- ಕರ್ಪುರದಿಂದ ಮಂಗಳಾರತಿ ಮಾಡಬೇಕು

15. ನಮಸ್ಕಾರ- ಪ್ರದಕ್ಷಿಣೆ ಮಾಡಿ ದೇವರಿಗೆ ಸಾಷ್ಟಾಂಗ ನಮಸ್ಕಾರ ಮಾಡಬೇಕು

16. ಪ್ರಾರ್ಥನೆ- ಶಿವನಲ್ಲಿ ತಮ್ಮ ಇಷ್ಟಗಳನ್ನು ನಡೆಸಿಕೊಡು ಎಂದು ಅರಿಕೆ ಅಥವಾ ಪ್ರಾರ್ಥನೆ ಮಾಡಬೇಕು. ಪೂಜೆಯ ನಂತರ ದೇವರು ಅನುಗ್ರಹಿಸಿರುವ ಅರಿಶಿನ ಕುಂಕುಮ, ನೈವೇದ್ಯವನ್ನು ಪ್ರಸಾದ ರೂಪವಾಗಿ ಸ್ವೀಕರಿಸಬೇಕು. ಹೀಗೆ ಕ್ರಮವಾಗಿ ಶಿವನ ಪೂಜೆ ಮಾಡಬೇಕು. 

ಹಾಲು, ಮೊಸರು, ತುಪ್ಪ, ಬಾಳೆಹಣ್ಣು, ಹಲಸು ಮೊದಲಾದ ಹಣ್ಣುಗಳು, ಗೋಡಂಬಿ, ದ್ರಾಕ್ಷಿ, ಉತ್ತುತ್ತೆ ಮೊದಲಾದ ವಿವಿಧ ಪದಾರ್ಥಗಳನ್ನು ಅಭಿಷೇಕಕ್ಕಾಗಿ ಬಳಸಬಹುದು. ಈ ಎಲ್ಲಾ ಪದಾರ್ಥಗಳನ್ನು ಶಿವಲಿಂಗದ ಮೇಲೆ ವಿಶೇಷ ರೀತಿಯಲ್ಲಿ ಮೆತ್ತಿ ಅಲಂಕರಿಸಿ, ಪೂಜಿಸಿ, ನಂತರ ಪ್ರಸಾದ ರೂಪದಲ್ಲಿ ಸ್ವೀಕರಿಸಬಹುದು. 

ಬಿಲ್ವ, ಕಮಲ, ದಾಸವಾಳ, ಪುನ್ನಾಗ, ಕಣಿಗಲೆ, ತುಳಸಿ, ಎಕ್ಕದೆಲೆ, ಉತ್ತರಾಣಿ, ರುದ್ರ ಜಟೆ, ದವನ, ದತ್ತೂರಿ, ತುಂಬೆ, ಗರಿಕೆ, ನಂದಿ ಬಟ್ಟಲು, ಪಗಡೆ ಹೂ, ಬಸವನ ಪಾದದ ಹೂ, ಅಕ್ಷತೆ ಕಾಳುಗಳಲ್ಲಿ ಅರ್ಚನೆ ಮಾಡಬಹುದು. 

ಶಿವ ರಾತ್ರಿ ಎಂಬ ಹೆಸರಿಗೆ ತಕ್ಕಂತೆ ಹಗಲಿನ ಜೊತೆಗೆ ರಾತ್ರಿಯೂ ಶಿವನ ಪೂಜೆ, ಆರಾಧನೆ ಮಾಡಬೇಕು. ಜಾವ(ಯಾಮ) - ದಿವಸದ ಎಂಟನೆಯ ಒಂದು ಭಾಗದಷ್ಟು ಕಾಲ, ಮೂರು ಗಂಟೆ ಕಾಲ ಎಂದರ್ಥ. ರಾತ್ರಿಯ 4 ಜಾವಗಳಲ್ಲೂ ಈಶ್ವರನಿಗೆ ಅಭಿಷೇಕ ಪೂಜೆ ಮಾಡುತ್ತಾರೆ. ಈಶ್ವರನ ಭಜನೆ, ಹಾಡು, ಸ್ತೋತ್ರಗಳನ್ನು ಹೇಳುತ್ತಾ ಜಾಗರಣೆ ಮಾಡುತ್ತಾರೆ. ಹೀಗೆ ದಿನವಿಡೀ ಶಿವನ ಧ್ಯಾನದಲ್ಲಿ ಕಳೆಯಬೇಕು. 

ಮಹಾಶಿವರಾತ್ರಿ ವ್ರತದ ಮಹಿಮೆ ಮೃತ್ಯುವಿನಿಂದ ಅಮೃತತ್ವದ ಕಡೆಗೆ, ಹುಟ್ಟು, ಸಾವುಗಳಿಂದ ಭಗವಂತನ ಚಿರ ಸಾನ್ನಿಧ್ಯದ ಕಡೆಗೆ, ಬದುಕಿನ ನಿರಂತರ ಜಂಜಾಟದಿಂದ ಶಿವನ ಪಾದಗಳಲ್ಲಿ ಲೀನವಾಗುವುದೇ ಈ ಮಹಾಶಿವರಾತ್ರಿ.

Wednesday, 20 January 2016

ಅಂಬಿಗರ ಚೌಡಯ್ಯ

ಹನ್ನೆರಡನೇ ಶತಮಾನ ಎನ್ನುವುದು ಈಗಲೂ ನಮ್ಮನ್ನು ಭಾವನಾತ್ಮಕವಾಗಿಯೇ ಆಳುತ್ತಿದೆ. ಆಚರಣೆಗಳ ಭಾರಕ್ಕೆ ಬಗ್ಗಿ ಹೋಗಿದ್ದ ಸನಾತನ ಸಂಸ್ಕೃತಿಯಲ್ಲಿ ಬೆಳೆದಿದ್ದ ವರ್ಣಕಳೆಯನ್ನು ಅಂದು ವಚನ ಸಂಸ್ಕೃತಿಯೆಂಬ ಧಾರ್ಮಿಕ ಕ್ರಾಂತಿಯು ಆವರಿಸಿಕೊಂಡಿತ್ತು. ತನ್ನ ಸರಳವಾದ ಭಾಷೆಯ ಮೂಲಕ ಜನರ ನಾಡಿ ಮಿಡಿತದೊಳಗೆ ಮಿಳಿತವಾಗಿ ಎಲ್ಲ ವರ್ಗಗಳ ವಿವೇಕ ಜಾಗೃತಿಯ ಕೆಲಸವನ್ನು ಅದು ಪರಿಣಾಮಕಾರಿಯಾಗಿ ಮಾಡಿತ್ತು. ಆ ಧಾರ್ಮಿಕ ಕ್ರಾಂತಿಗೆ ಶೋಷಿತ ವರ್ಗಕ್ಕೆ ಬೆನ್ನೆಲುಬಾಗುವ ಆಶಯವಷ್ಟೇ ಇರಲಿಲ್ಲ. ಎಲ್ಲೆಡೆಯೂ ಸಮಾನತೆಯ ತತ್ವವನ್ನು, ಜಾತಿ ರಹಿತ ವ್ಯವಸ್ಥೆಯನ್ನು ನಿರ್ಮಾಣ ಮಾಡುವ ನಿಷ್ಕಳಂಕ ಕಾಳಜಿಯೂ ಅದಕ್ಕಿತ್ತು.

ಬಸವಣ್ಣ, ಅಲ್ಲಮ ಪ್ರಭು, ಅಕ್ಕಮಹಾದೇವಿ, ಮಾದಾರ ಚೆನ್ನಯ್ಯ, ಹಡಪದ ಅಪ್ಪಣ್ಣ, ಒಬ್ಬರೇ ಇಬ್ಬರೇ! ಹತ್ತಾರು ಶಿವಶರಣರು ವರ್ಣತಂತುಗಳನ್ನು ಕಿತ್ತೊಗೆಯಲು ಪಣತೊಟ್ಟು ಸಮಾಜದ ಅಂತ:ಸತ್ವವನ್ನು ಬಡಿದೆಬ್ಬಿಸಿದ್ದರು. ವಚನ ಸಂಸ್ಕೃತಿಯು ಸಮಾಜಕ್ಕೆ ನೀಡಿದ ಕ್ರಿಯಾತ್ಮಕ ಬೆರಗು, ಒದಗಿಸಿದ ಆರೋಗ್ಯಕರ ಸಂದೇಹ ಮತ್ತು ಹರವಿಟ್ಟ ಅವಿಚ್ಛಿನ್ನ ದೃಢತೆಯ ಅಭಿವ್ಯಕ್ತಿ ಇಂದಿಗೂ ಆದರ್ಶಯುತವೇ ಆಗಿ ಉಳಿದಿದೆಯೆಂದರೆ ಅದು ನಮ್ಮ ಭಾಷೆಯ, ಸಂಸ್ಕೃತಿಯ ಉತ್ಕೃಷ್ಟತೆಯನ್ನು ಆ ದಿನಗಳಲ್ಲಿಯೇ ಸ್ಪರ್ಶಿಸಿದ್ದಲ್ಲಿ ಯಾವುದೇ ಸಂದೇಹ ಇಲ್ಲ.

ಇಂತಹ ಶರಣ ಸಂಸ್ಕೃತಿಯಲ್ಲಿ ಸಾಗಿಹೋದ ಮಹಾಚೇತನಗಳ ಕುರಿತು ಸ್ವಲ್ಪ ಸಂಯಮದೊಂದಿಗೆ ಅವಲೋಕಿಸಿದಾಗ ಒಬ್ಬ ವ್ಯಕ್ತಿ ನಮ್ಮನ್ನು ಬಿಟ್ಟೂಬಿಡದ ರೀತಿಯಲ್ಲಿ ಆವರಿಸಿಕೊಂಡು ಅಂತರಂಗವನ್ನು ತಟ್ಟುತ್ತಾನೆ. ರಭಸ ನೀರಿನ ವಿರುದ್ಧ ಈಜುವ ಹಾಯಿದೋಣಿ, ತೆಪ್ಪದಲ್ಲಿ ಕುಳಿತ ಅಮಾಯಕ ಜನ, ಧೀರನಂತೆ ನಿಂತ ಹರಿಗೋಲು ಕೈಯಲ್ಲಿ ಹಿಡಿದ ಆ ಅಂಬಿಗ- ಹೀಗೆಯೇ ಆತನನ್ನು ನಾವು ಕಲ್ಪಿಸಿಕೊಳ್ಳಬೇಕು. ಆ ಅಂಬಿಗನ ಕೈಯಲ್ಲಿದ್ದದ್ದು ಅಂತಿಂತಹ ಹರಿಗೋಲಲ್ಲ. ಅದು ತನ್ನ ಜೊತೆಗಿದ್ದವರನ್ನು ಮನೋಸ್ವಾತಂತ್ರ್ಯದ ನೆಲೆಗೆ ಕರೆದೊಯ್ಯುವ ಭರವಸೆಯ, ಬಂಡಾಯದ ಹರಿಗೋಲು ಎನ್ನುವುದನ್ನೂ ನಾವು ನೆನಪಿನಲ್ಲಿಟ್ಟುಕೊಳ್ಳಬೇಕು.

ಅಂಬಿಗರ ಚೌಡಯ್ಯ ವಚನಕಾರರರೆಲ್ಲರಲ್ಲಿ ಇದ್ದ ಸುಶಿಕ್ಷವಾದ ಅಭಿವ್ಯಕ್ತಿ ಮಾರ್ಗವನ್ನು ತುಳಿಯಲಿಲ್ಲ. ತನ್ನ ಹತಾಶೆ, ನೋವು, ಬೇಗುದಿ ಎಲ್ಲವನ್ನೂ ಆತ ತನ್ನದೇ ತೀಕ್ಷ್ಣಪದಗಳ ಆಡುನುಡಿಯ ಮೂಲಕ ನಿರ್ಭಿಡೆಯಿಂದ ಬೆತ್ತಲಾಗಿಸುತ್ತಾ ಹೋದ. ಅಲ್ಲದೇ ಎಲ್ಲಾ ವಚನಕಾರರ ಹಾದಿಯಲ್ಲಿ ತಾನು ನಡೆಯದೇ ಇಷ್ಟ ದೈವದ ಬದಲಿಗೆ ತನ್ನದೇ ಹೆಸರನ್ನು ತನ್ನ ವಚನಗಳ ಅಂಕಿತವಾಗಿ ಬಳಸಿಕೊಂಡು ಸಮಾಜದ ಓರೆಕೋರೆಗಳನ್ನು ತಿದ್ದುವ ಯತ್ನ ಮಾಡಿದ. ಅಂಬಿಗರ ಚೌಡಯ್ಯ ನಿಜಾರ್ಥದಲ್ಲಿ ಬಂಡಾಯ ವಚನ ಸಂಸ್ಕೃತಿಯ ಹರಿಕಾರ. ವಚನ ಸಂಸ್ಕೃತಿಯ ಆ ತರ್ಕದ ಲೆಕ್ಕಾಚಾರಗಳಿಂದ ದೂರವುಳಿದು ಗಟ್ಟಿ ಮೌಲ್ಯಗಳ, ನಿರ್ಭಿಡೆಯ ನುಡಿಗಟ್ಟುಗಳ ಮೂಲಕ ಸಮಾಜದ ಓರೆಕೋರೆಗಳನ್ನು ಬೆತ್ತಲೆಯಾಗಿಸಿದ ಚೌಡಯ್ಯನ ಆಕ್ರೋಶದ ಅಭಿವ್ಯಕ್ತಿಯ ಹಾದಿ ಇಂದಿಗೂ ನಮ್ಮನ್ನು ಬೆಚ್ಚಿಸಿ ವಿಸ್ಮಯಗೊಳಿಸುತ್ತದೆ. ಆತ, ಮುನ್ನೂರರ ಆಸುಪಾಸಿನ ಸಂಖ್ಯೆಯ ವಚನಗಳನ್ನು ಬರೆದಿದ್ದಾನೆ. ಒಂದೆರಡನ್ನು ಓದಿಕೊಳ್ಳಿ. ಆತನ ಆಶಯ, ಧಾಟಿ ನಿಮಗೆ ಅರ್ಥವಾದೀತು.

ಉಚ್ಚೆಯ ಬಚ್ಚಲಲ್ಲಿ ಹುಟ್ಟಿ, ನಾ ಹೆಚ್ಚು
ನೀ ಹೆಚ್ಚು ಎಂಬುವವರನ್ನು ಮಚ್ಚಿಲೇ ಹೊಡೆಯೆಂದಾನಂಬಿಗರ ಚೌಡಯ್ಯ

ಕಂತೆ ತೊಟ್ಟವ ಗುರುವಲ್ಲ
ಕಾವಿ ಹೊತ್ತವ ಜಂಗಮನಲ್ಲ
ಶೀಲ ಕಟ್ಟಿದವ ಶಿವಭಕ್ತನಲ್ಲ
ನೀರು ತೀರ್ಥವಲ್ಲ, ಕೂಳು ಪ್ರಸಾದವಲ್ಲ
ಹೌದೆಂಬವನ ಬಾಯಿ ಮೇಲೆ
ಅರ್ಧ ಮಣೆಯ ಪಾದರಕ್ಷೆಯ ತೆಗೆದುಕೊಂಡು
ಮಾಸಿ ಕಡಿಮೆಯಿಲ್ಲದೆ ತೂಗಿ ತೂಗಿ ಟೊಕಟಕನೆ
ಹೊಡಿ ಎಂದಾತ ನಮ್ಮ ಅಂಬಿಗರ ಚೌಡಯ್ಯ

ನನ್ನ ಕುಲ ಹೆಚ್ಚು, ನಿನ್ನ ಕುಲ ಕಡಿಮೆ
ಎಂದು ಹೊಡೆದಾಡುವಂತಹ ಅಣ್ಣಗಳನ್ನು
ಹಿಡಿತಂದು ಮೂಗನೆ ಸವರಿ ಮೆಣಸಿನ ಹಿಟ್ಟು
ತುಪ್ಪವ ತುಂಬಿ ನಮ್ಮ ಪಡಿಹಾರಿ ಉತ್ತಣ್ಣನ
ವಾಮ ಪಾದುಕೆಯಿಂದ ಫಡಫಡನೆ ಹೊಡೆಯಬೇಕೆಂದ
ನಮ್ಮ ಅಂಬಿಗರ ಚೌಡಯ್ಯ

ಮೊಲೆ ಮೂಡಿ ಬಂದರೆ ಆ ಪಿಂಡವನು ಹೆಣ್ಣೆಂಬರು
ಗಡ್ಡ ಮೀಸೆಗಳು ಬಂದರೆ ಆ ಪಿಂಡವನು ಗಂಡೆಂಬರು
ಆ ಇಬ್ಬರ ನಡುವೆ ಸುಳಿವ ಆತ್ಮ ಹೆಣ್ಣೂ ಅಲ್ಲ ಗಂಡೂ ಅಲ್ಲ
ನೋಡಿರೆಂದನಮ್ಮಂಬಿಗರ ಚೌಡಯ್ಯ

ಈಶ್ವರನನ್ನು ಕಾಂಬುದೊಂದಾಶೆಯುಳ್ಳೊಡೆ
ಪರದೇಶಕ್ಕೆ ಹೋಗಿ ಬಳಲದಿರು!
ಕಾಶಿಯಲ್ಲಿ ಕಾಯುವ ವಿನಾಶ ಮಾಡಬೇಡ!
ನಿನ್ನಲ್ಲಿ ನೀ ತಿಳಿದು ನೋಡಾ, ಜಗವು ನಿನ್ನೊಳಗೆಂತಾದ ಅಂಬಿಗರ ಚೌಡಯ್ಯ

ಅಂತರಂಗದ ಬೇಗುದಿಯನ್ನು, ಕಳಕಳಿಯನ್ನು ನಿರ್ಭಿಡೆಯಿಂದ ಪ್ರಕಟಿಸಿದ ಅಂಬಿಗರ ಚೌಡಯ್ಯನ ಧಾಟಿ ಓದುಗನಿಗೆ ತೀವ್ರ ಒರಟೆನಿಸುವುದು ಸಹಜ. ಆದರೆ ಪ್ರಮುಖವಾಗಿ ನಾವು ಗಮನಿಸಬೇಕಾದ್ದು ಆ ಸಂವೇದನಾಶೀಲ ವಿಡಂಬನೆಯ ವಿಚಾರ ಸಿರಿವಂತಿಕೆ ಶತಮಾನಗಳು ಕಳೆದರೂ ಪ್ರಸ್ತುತವೇ ಆಗಿ ಉಳಿಯಬೇಕಿರುವ ಅವಶ್ಯಕತೆ.

ಒಂದು ಕ್ಷಣ ನಿಲ್ಲಿ! ಇಲ್ಲಿ ನಾನು ವಿವರಿಸಹೊರಟಿರುವುದು…

ಅಂಬಿಗರ ಚೌಡಯ್ಯನ ಬಂಡಾಯ ಮನೋಧರ್ಮದ ಕ್ರಾಂತಿ ಹಾದಿಯ ವೈಭವವನ್ನಲ್ಲ. ದುಷ್ಟ ಸಮಾಜದೆಡೆಗಿನ ಆತನ ತಾರ್ಕಿಕ ವಿಚಾರಣೆಯ ದಿಟ್ಟ ಧಾಟಿಯೂ ಅಲ್ಲ. ಮನೋದಾಸ್ಯದ ವಿರುದ್ಧ, ಜಾತಿ ವ್ಯವಸ್ಥೆಯ ವಿರುದ್ಧ ತನ್ನದೇ ಕಟು ನಿಃಸ್ವಾರ್ಥ ರೀತಿಯಲ್ಲಿ ಹೋರಾಡಿ ವಿಶ್ವಮಾನವ ಸಂದೇಶವನ್ನು ಬಿತ್ತಿ ಹೋದ ಛಡಿ ಏಟಿನ ಚೌಡಯ್ಯ ಇಂದಿನ ವ್ಯವಸ್ಥೆಗೆ ಅಪ್ರಸ್ತುತನಾಗುತ್ತಿದ್ದಾನೆಯೇ? ಇಂದಿನ ಅಂಬಿಗರ ಚೌಡಯ್ಯ, ಕಾಲಘಟ್ಟವೊಂದರ ಸಮಾಜವನ್ನು ಹೊಸಸ್ತರಕ್ಕೆ ಕರೆದೊಯ್ದಿದ್ದ ವಚನ ಸಂಸ್ಕೃತಿಯ ವೈಫಲ್ಯದ ಒಂದು ಪಾರ್ಶ್ವವನ್ನು ಬಿಂಬಿಸುತ್ತಿದ್ದಾನೆಯೇ? ಜಗತ್ತಿನ ಮುನ್ನಡೆಯೂ ಕಾಲದ ದೃಷ್ಟಿಯಿಂದ ಹಿನ್ನೆಡೆಯನ್ನು ಕಾಣುತ್ತದೆಯೇ? ಇಂತಹ ಪ್ರಶ್ನೆಗಳನ್ನು ಕೇಳಿಕೊಳ್ಳುವ ಕಾಲ ಇದು ಎನ್ನಿಸುತ್ತದೆ.

ಅಂಬಿಗರ ಚೌಡಯ್ಯನಂಥಹ ನಿಜಶರಣನ ಆ ಅಪೂರ್ವ ಸಂದೇಶಗಳು ಶತಮಾನಗಳು ಕಳೆಯುತ್ತಾ ಹೋದಂತೆ ಸಾಮಾಜಿಕ ವ್ಯವಸ್ಥೆಯಲ್ಲಿ ಗಟ್ಟಿಯಾಗುತ್ತಾ ಸಾಗಬೇಕಿತ್ತು. ಶೋಷಣೆಗೆ ಒಳಗಾದ ಸಮಾಜ ವರ್ಗದ ಅಂತಃಶಕ್ತಿ ಸ್ವಾವಲಂಬನೆಯಿಂದ ಸುಭದ್ರವಾಗಬೇಕಿತ್ತು. ವ್ಯವಸ್ಥೆಯಲ್ಲಿ ರೂಪಿತವಾದ ಜನಪರ ಕಲ್ಯಾಣ ಕಾರ್ಯಕ್ರಮಗಳು ಆ ವರ್ಗಗಳ ಅಂತರಂಗದಲ್ಲಿದ್ದ ಬೇಗುದಿಯನ್ನು ಭಸ್ಮ ಮಾಡಬೇಕಿತ್ತು. ಮತ್ತು ಇಡೀ ಸಮಾಜ, ಜಾತಿ-ವರ್ಗಗಳನ್ನು ಮೀರಿ ವಿಶ್ವಮಾನವ ಪ್ರಜ್ಞೆಯ ಉದಾರತೆಯನ್ನು ಗಳಿಸಿಕೊಳ್ಳುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿರಬೇಕಿತ್ತು. ಆದರೆ, ಇಂದಿನ ಪರಿಸ್ಥಿತಿ ನೋಡಿದಾಗ ಇಡೀ ವಚನ ಸಂಸ್ಕೃತಿಯ ಪರಿಣಾಮಗಳ ಬಗ್ಗೆ ವಿಷಾದವೆನಿಸುವ ಸಿನಿಕತೆ ಮೂಡುತ್ತದೆ.

ಚೌಡಯ್ಯ ಈಗ ಒಂದು ಜಾತಿಯ ಸ್ವತ್ತಾಗಿ ಸೊರಗಿದ್ದಾನೆ ಮತ್ತು ಆತನಷ್ಟೇ ಅಲ್ಲ, ಎಲ್ಲ ಶರಣರೂ ಒಂದೊಂದು ಜಾತಿಗೆ ಸೀಮಿತವಾಗಿಬಿಟ್ಟಿದ್ದಾರೆ. ಆಯಾ ಜಾತಿಯ ಇಂದಿನ ಜನಸಂಖ್ಯೆಯ ಪ್ರಾಬಲ್ಯದ ಮೇಲೆ ಆಯಾ ಶರಣರ ಸಂದೇಶಗಳು ಪ್ರಸ್ತುತತೆಯ ಕೀರ್ತಿಯನ್ನು ಗಳಿಸಿಕೊಳ್ಳುತ್ತಿರುವುದೂ ವಿಷಾದದ ಸತ್ಯ. ಅಂಬಿಗರ ಚೌಡಯ್ಯನ ವಿಷಯದಲ್ಲಿಯಂತೂ, ಶರಣನಾಗಲು ಆತ ದೀಕ್ಷೆ ನೀಡಿದ ಒಂದು ಜಾತಿ ಅವನನ್ನು ಒಂದೆಡೆಗೆ ಎಳೆಯುತ್ತಿದ್ದರೆ ಅವನು ಜನಿಸಿದ ಮೂಲಜಾತಿಯ ಮತಸ್ಥರು ಆತನನ್ನು ತಮ್ಮ ಸಾಮಾಜಿಕ ಅಸ್ತಿತ್ವದ ಕುರುಹಾಗಿ ಸ್ವೀಕರಿಸಿ ತಮ್ಮೆಡೆಗೆ ಸೆಳೆದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಆತ, ಇಂದು ರಾಜಕಾರಣಿಗಳಿಗೆ ಮತಬ್ಯಾಂಕನ್ನು ಸೃಷ್ಟಿಸುವ ಮೋಡಿಗಾರ. ಇಂದು ಆತನ ಹೆಸರಿನಲ್ಲಿ ಎರಡು ವಿಶ್ವ ವಿದ್ಯಾಲಯಗಳಲ್ಲಿ ‘ಪೀಠ’ ಎನ್ನುವ ಗದ್ದುಗೆಗಳನ್ನು ಸ್ಥಾಪಿಸಲಾಗಿದೆ. ರಾಜಕೀಯ ಪ್ರಾಬಲ್ಯದ ಕಾರಣ ಆತನ ಜಯಂತಿಯ ಆಚರಣೆಗೆ ಸರ್ಕಾರದ ಅಧಿಕೃತ ಮುದ್ರೆಯೂ ಬಿದ್ದಿದೆ. ಆತನ ವಚನಗಳಲ್ಲಿದ್ದ ಧರ್ಮ ನಿರ್ಭಿಡತೆಯ, ಜೀವನ ಪ್ರೀತಿಯ ಆಶಯ ಅವನತಿಯೆಡೆಗೆ ಮುಖ ಮಾಡಿ ನಿಲ್ಲುತ್ತಿದೆ. ಜಾತಿಯೆಂಬ ವಿಹೀನ ಆಚರಣೆ ಸಂಸ್ಕೃತಿಯೆಂಬ ಜೀವನತತ್ವವನ್ನೇ ಬುಡಮೇಲು ಮಾಡಲು ನಿಂತಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಇನ್ನು, ಆಡಳಿತ ಚುಕ್ಕಾಣಿ ಹಿಡಿದ ಸರ್ಕಾರಗಳು ಆತನ ತಾತ್ವಿಕ ಸಂದೇಶಗಳನ್ನು, ಜಾತಿ-ಧರ್ಮಗಳ ಸಂಕೋಲೆಗಳಿಂದ ಮುಕ್ತಗೊಳಿಸಿ ಇಡೀ ಸಾಮಾಜಿಕ ವ್ಯವಸ್ಥೆಯೊಳಗೆ ಹರಿಸುವ ಪ್ರಾಮಾಣಿಕ ಪ್ರಯತ್ನಗಳನ್ನು ಮಾಡುತ್ತಿವೆಯೇ? ಈ ಜಾಡಿನಲ್ಲಿ ಸಿಗುವ ಕೆಲವು ಸತ್ಯಗಳು ಇಂದಿನ ಮಟ್ಟಿಗಂತೂ ನಿರಾಶೆಯನ್ನೇ ಮೂಡಿಸುತ್ತವೆ.

೧. ರಾಣಿಬೆನ್ನೂರು ತಾಲ್ಲೂಕಿನ ಚೌಡಯ್ಯದಾನಪುರದ ಗ್ರಾಮದ ಪಕ್ಕದಲ್ಲಿಯೇ ವಿಶಾಲವಾಗಿ ಹರಿಯುವ ತುಂಗಭದ್ರೆಯ ತಟದಲ್ಲಿ ಚೌಡಯ್ಯ ಲಿಂಗೈಕ್ಯನಾದ ಸ್ಥಳ ಇದೆ. ಪ್ರತಿ ಮಳೆಗಾಲದಲ್ಲಿನ ನೆರೆಗೆ ಅದಕ್ಕೆ ಮುಳುಗುವ ಭಾಗ್ಯವೂ, ದೌರ್ಭಾಗ್ಯವೂ ಇದೆ. ಅಂಬಿಗನ ಆತ್ಮವಾದ ಕಾರಣ, ಮುಳುಗದೇ ಉಳಿದೆನೆನ್ನುವ ಹಾಗೆ ದರ್ಶನ ನೀಡುವ ಸೌಭಾಗ್ಯವೂ ಅದಕ್ಕಿದೆ. ಈ ಚೌಡಯ್ಯದಾನಪುರದ ಜಾಗವನ್ನು ಅಂಬಿಗರ ಚೌಡಯ್ಯ ತನ್ನ ಗುರುವಾದ ಶಿವದೇವಮುನಿಗಳಿಗೆ ದಾನವಾಗಿ ಕೊಟ್ಟಿರುವ ಬಗ್ಗೆ ಶಿಶುನಾಳ ಷರೀಫರು ರಚಿಸಿದ ‘ಶಿವದೇವ ವಿಜಯಂ’ ಎಂಬ ಪುಸ್ತಕದಲ್ಲಿ ಉಲ್ಲೇಖವಿದೆ. ಹಾಗಾಗಿಯೇ ಊರಿಗೆ ಆ ಹೆಸರು ರೂಢಿಗೆ ಬಂದಿತೆಂದೂ ಅದರಲ್ಲಿ ವಿವರಿಸಲಾಗಿದೆ.

ವೀರಶೈವ ಸಮುದಾಯದ ಶಿವದೇವಮುನಿಗಳು ಆತನಿಗೆ ಲಿಂಗದೀಕ್ಷೆ ನೀಡಿದರೆಂಬ ಕಾರಣಕ್ಕೆ, ಅನುಜನೆಂಬ ಮಮತೆಗೆ ಶ್ರೀ ಶಿವದೇವ ಒಡೆಯರ ಎಂಬ ವಕೀಲರು ಚೌಡಯ್ಯ ಲಿಂಗೈಕ್ಯನಾದ ಸ್ಥಳದಲ್ಲಿ ಗದ್ದುಗೆಯ ಜೀರ್ಣೋದ್ಧಾರ ಮಾಡಿ ೧೯೬೮ರಷ್ಟು ಹಿಂದೆಯೇ ಪುಟ್ಟದಾದ ಐಕ್ಯ ಮಂಟಪವನ್ನು ನಿರ್ಮಿಸಿದ್ದಾರೆ. ಕಾಲಾನುಕ್ರಮದಲ್ಲಿ ಸಾಮಾಜಿಕ ಪರಿಸ್ಥಿತಿಗಳ ಮನ್ವಂತರದ ಹಿನ್ನೆಲೆಯಲ್ಲಿ ರಾಜಕೀಯ ಪ್ರಾಬಲ್ಯಗಳು ಹೆಚ್ಚಿದಂತೆಲ್ಲಾ ಅಂಬಿಗರ ಚೌಡಯ್ಯನ ಮೂಲ ಸಮಾಜಸ್ಥರು ‘ಸಬಲತೆ’ಯನ್ನು ಗಳಿಸಿಕೊಂಡಿದ್ದಾರೆ. ಅದು ಸಹಜವೂ ಹೌದು. ಈ ಕಾರಣಕ್ಕೆ ಅಂಬಿಗರ ಚೌಡಯ್ಯ ತಮ್ಮವನೆಂದು ಹೇಳಿಕೊಳ್ಳುವ ಕಸುವು ಅವರಲ್ಲಿ ವೃದ್ಧಿಯಾಗಿ ಎರಡೂ ವರ್ಗಗಳಲ್ಲಿ ಹಬ್ಬಿದ ವಿಚಾರಭೇದಗಳು ಚೌಡಯ್ಯನ ಆತ್ಮವನ್ನು ಅನಾಥನನ್ನಾಗಿ ಮಾಡಿವೆ! ಇಂದು ಅಂಬಿಗರ ಚೌಡಯ್ಯನ ಐಕ್ಯಮಂಟಪದ ಸುತ್ತಲೂ, ಒಳಗೂ ಕಸ, ಕಡ್ಡಿ, ಕೊಳಚೆಗಳು ನಾರುತ್ತಿವೆ. ಪಕ್ಕದಲ್ಲಿಯೇ ಮರಳು ಸಾಗಾಣಿಕೆ ದಂಧೆ ಎಗ್ಗಿಲ್ಲದೇ ನಡೆಯುತ್ತಿದ್ದರೆ ಸುತ್ತಮುತ್ತಲಿನ ಜಾಗ ಗ್ರಾಮಸ್ಥರ ಬಹಿರ್ದೆಸೆಯ ನಿರಾಳತೆಗೂ ಸಾಕ್ಷಿಯಾಗಿ ನಿಂತಿದೆ. ಪಕ್ಕದಲ್ಲಿಯೇ, ಮೇಲ್ಮಟ್ಟದಲ್ಲಿ ಇದ್ದುದರಲ್ಲಿ ಸುರಕ್ಷಿತವಾಗಿರುವ ಚಾಲುಕ್ಯರ ಕಾಲದ ಮುಕ್ತೇಶ್ವರ ದೇವಸ್ಥಾನ ಪಾರಂಪರಿಕ ಪಟ್ಟ ಗಿಟ್ಟಿಸಿಕೊಂಡು ಅದನ್ನು ಅಣಕಿಸುವಂತೆ ತೋರುತ್ತದೆ.

ಒಡೆಯರ ಮತದ ಇಂದಿನ ಮಠಾಧೀಶರು ಅಂಬಿಗರ ಚೌಡಯ್ಯನನ್ನು ಆತನ ಮೂಲ ಸಮುದಾಯ ರಾಜಕೀಯವಾಗಿ ಅಪಹರಿಸಿಕೊಂಡಿರುವ ವಿಷಯದ ಬಗ್ಗೆ ಖಿನ್ನತೆಯ ಉಪೇಕ್ಷೆಯನ್ನು ತೋರಿದಂತೆ ಕಂಡರೆ, ಚೌಡಯ್ಯನ ಮೂಲ ಮತಸ್ಥರು ರಾಜಕೀಯ ನಾಯಕರ ಸಹಕಾರದೊಂದಿಗೆ ಹೊಸದಾಗಿ ಬೇರೊಂದು ಸ್ಥಳದಲ್ಲಿ ‘ಅಂಬಿಗರ ಚೌಡಯ್ಯನ ಪೀಠ’ವನ್ನು ನಿರ್ಮಿಸುವ ಬೃಹತ್ ಕಾರ್ಯದಲ್ಲಿ ತೊಡಗಿದ್ದಾರೆ. ಐಕ್ಯ ಮಂಟಪ ಅನಾಥವಾಗಿದೆ. ತುಂಗಭದ್ರೆಯೂ ಸಹನೆಯಿಂದ ಸೊರಗಿದ್ದಾಳೆ.

೨. ಕಳೆದ ಎಂಟು ವರ್ಷಗಳ ಹಿಂದೆ ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ‘ಅಂಬಿಗರ ಚೌಡಯ್ಯನ ಪೀಠ’ ಸ್ಥಾಪನೆಯಾಗಿದೆ. ಸರ್ಕಾರ ನೀಡಿದ ಎರಡು ಕೋಟಿ ಅನುದಾನದಲ್ಲಿ ಒಂದೂವರೆ ಕೋಟಿಯಷ್ಟು ಹಣವನ್ನು ಸ್ಮಾರಕ ಭವನ ನಿರ್ಮಿಸಿ ಅದರೊಳಗೆ ಮೌನ ವಾತಾವರಣವನ್ನು ಸೃಷ್ಟಿ ಮಾಡಲಾಗಿದೆ. ಉಳಿದ ಐವತ್ತು ಲಕ್ಷವನ್ನು ಬ್ಯಾಂಕಿನಲ್ಲಿ ಸ್ಥಿರಠೇವಣಿ ಇಟ್ಟು ಅದರಿಂದ ಬರುವ ಸಣ್ಣ ಮೊತ್ತದ ಬಡ್ಡಿಯ ಮೂಲಕ ವರ್ಷಕ್ಕೊಮ್ಮೆ 'ಅಂಬಿಗರ ಚೌಡಯ್ಯ ಜಯಂತಿ'ಯನ್ನು ಆಚರಿಸಲಾಗುತ್ತದೆ. ಆಗಾಗ್ಗೆ ಒಂದೆರಡು ವಿಚಾರ ಸಂಕಿರಣಗಳನ್ನೂ ನಡೆಸಿ ಖರ್ಚು ಭರಿಸುವ ಶಾಸ್ತ್ರ ಮಾಡಲಾಗುತ್ತದೆ.

ವಿಶ್ವವಿದ್ಯಾಲಯದಲ್ಲಿ ದೈನಂದಿನ ಪಾಠ ಮಾಡಲೂ ಲಭ್ಯವಿಲ್ಲದ ಹಾಗಿರುವ ಪ್ರೊಫೆಸರ್ ಗಳ ಕೊರತೆ ಪೀಠ ನಿರ್ವಹಣೆಗೂ ವ್ಯಾಪಿಸಿದೆ. ಆ ಸ್ಥಳಕ್ಕೆ ಆಗಾಗ್ಗೆ ಎಡತಾಕುವ ಅಂಬಿಗರ ಚೌಡಯ್ಯನ ‘ಸಮಾಜ’ದ ವ್ಯಕ್ತಿಗಳು ತಮ್ಮ ಜಾತಿಯವರನ್ನೇ ಪೀಠದ ನಿರ್ದೇಶಕರನಾಗಿ ಮಾಡಬೇಕೆಂದು ಆಗ್ರಹಿಸುತ್ತಾರೆ. ಅಲ್ಲಿರುವ ಪ್ರತಿಕೂಲ ಪರಿಸ್ಥಿತಿಯ ಕಾರಣ ಉತ್ತರ ದೊರಕದೇ ಇನ್ನೊಮ್ಮೆ ಬರುತ್ತೇವೆಂದು ಗಡುವು ನೀಡಿ ಹೋಗುತ್ತಾರೆ.

ಮಂಗಳೂರು ವಿಶ್ವವಿದ್ಯಾಲಯದಲ್ಲೂ ಅಂಬಿಗರ ಚೌಡಯ್ಯನ ಪೀಠ ೨೦೧೨ರಿಂದ ಇದ್ದು ಅಲ್ಲಿಯೂ ಪರಿಸ್ಥಿತಿ ಭಿನ್ನವಿಲ್ಲ. ವಿಚಾರ ಸಂಕಿರಣ, ಜಯಂತಿಗಳನ್ನು ಹೊರತು ಪಡಿಸಿದರೆ ಚೌಡಯ್ಯನ ತತ್ವ, ಜೀವನ, ಸಿದ್ಧಾಂತಗಳನ್ನು, ಜನಸಾಮಾನ್ಯರ ಮನಸ್ಸುಗಳಲ್ಲಿ ಬಿತ್ತುವ ವಿಶಿಷ್ಟ ಪ್ರಯತ್ನಗಳೇನೂ ಆಗಿಲ್ಲ. ಒಂದು ಪುಸ್ತಕ ಪ್ರಕಟವಾಗಿದ್ದರೂ ಸಾಮಾನ್ಯ ಜನರ ಮನಸ್ಸುಗಳನ್ನೂ ಹೇಗೆ ಮುಟ್ಟಿದೆ ಎಂಬುದರ ಬಗ್ಗೆ ಯಾರಿಗೂ ಗೊತ್ತಿಲ್ಲ. ಅಂಬಿಗರ ಚೌಡಯ್ಯನ ಮತಸ್ಥರೆನ್ನುವ ಮೊಗವೀರರು ಈ ಪೀಠದ ಕಾರಣ ಎಷ್ಟು ಲಾಭ ಪಡೆದಿದ್ದಾರೆ? ತಿಳಿಯುವುದಿಲ್ಲ. ಅಲ್ಲಿಗೂ ಸರ್ಕಾರ ನೀಡಿರುವ ಐವತ್ತೇ ಲಕ್ಷದ ಅನುದಾನದಲ್ಲಿ ಬೇರೇನಾದರೂ ಹೇಗೆ ಮಾಡಲು ಸಾಧ್ಯ?

ಅಂಬಿಗರ ಚೌಡಯ್ಯ ನಮ್ಮನ್ನು ಬಿಟ್ಟೂ ಬಿಡದೇ, ಶಿಲುಬೆಯೇರಿದ ಏಸುಕ್ರಿಸ್ತನನ್ನು ನೆನಪಿಸುತ್ತಾನೆ.

ಒಂಟಿಯಾಗಿ ನಡೆದು ಹೋದ ಬುದ್ಧನನ್ನೂ ಜ್ಞಾಪಿಸುತ್ತಾನೆ. ಏಸು ಕ್ರಿಸ್ತ ಯಹೂದಿಯಾಗಿಯೇ ಶಿಲುಬೆಗೇರಿದ. ತದನಂತರ ಕ್ರೈಸ್ತಧರ್ಮ ಉದಯವಾಯಿತು. ಗೌತಮ ಬುದ್ಧ ಸಾಗಿಹೋದ ಬಳಿಕವೇ ಬೌದ್ಧ ಧರ್ಮ ಚಿಗುರೊಡೆಯಿತು. ಅವರಿಬ್ಬರಿಗೂ, ಮಾನವಪ್ರೀತಿಯ ಹೊರತು ಹೊಸದೊಂದು ಧರ್ಮ ಸ್ಥಾಪನೆಯ ಕನಸಿರಲಿಲ್ಲ. ಅಂಬಿಗರ ಚೌಡಯ್ಯನೂ ಸನಾತನ ಧರ್ಮದ ಓರೆಕೋರೆಗಳನ್ನು ಖಂಡಿಸಿದ್ದಷ್ಟೇ ಅಲ್ಲ, ಜಾತಿ ಪದ್ಧತಿಯನ್ನು ನಿರಾಕರಿಸಿದ. ತನ್ನದೇ ರೀತಿಯಲ್ಲಿ ವಿಶ್ವ ಮಾನವತಾವಾದವನ್ನು ಪ್ರತಿಪಾದಿಸಿ ಸಾಗಿಹೋದ. ಆದರೆ, ಆತನ ಆತ್ಮವನ್ನು ಇಂದು ಜಾತಿಯ ಸಂಕೋಲೆಗಳಿಂದ ಬಿಗಿದು ಬಂಧಿಸಲಾಗಿದೆ. ಮಗ್ಗುಲು ಬದಲಿಸಲು ಆತನ ಚೇತನ ಇನ್ನೆಷ್ಟು ದಿನ ಕಾಯಬೇಕೋ?

ಕುವೆಂಪುರವರು ಭಾರತೀಯತೆಯ ಹೆಸರಿನಲ್ಲಿ ಎಲ್ಲಾ ಜಾತಿ ಮತಗಳನ್ನು ಉಳಿಸಿಕೊಳ್ಳುವುದಾದರೆ ಅಂತಹ ಭಾರತೀಯತೆ ಎಂದಿಗೂ ಪ್ರಸ್ತುತವಾಗುವುದಿಲ್ಲ. ವಿಶ್ವಮಾನವ ತತ್ವದ ಹೊರತು ಬದುಕಿಗೆ ಬೇರೆ ಯಾವುದೇ ಪರ್ಯಾಯವಿಲ್ಲ ಎಂದು ಪದೇ ಪದೇ ಹೇಳುತ್ತಿದ್ದರು. ಈ ಪ್ರಸ್ತುತತೆ ಎಂಬ ಪದದ ಅರ್ಥವ್ಯಾಪ್ತಿಯನ್ನು ಹಿಗ್ಗಿಸಬೇಕೇ ಎನ್ನುವ ಪ್ರಶ್ನೆಗೆ ಮನಸ್ಸು ಮೌನವನ್ನು ಮುರಿಯುವುದಿಲ್ಲ.

ಅಂದಹಾಗೆ ಅಂಬಿಗರ ಚೌಡಯ್ಯನ ಜಯಂತಿಯನ್ನು ಸರ್ಕಾರ ಅಧಿಕೃತವಾಗಿ ಜನವರಿ ೨೧ರಂದು ಆಚರಿಸುತ್ತದೆ. ಅಂದು, ಚೌಡಯ್ಯನ ಸಮುದಾಯಕ್ಕೆ ಇನ್ನೂ ಹೆಚ್ಚಿನ ರಾಜಕೀಯ ಪ್ರಾತಿನಿಧ್ಯ ಸಿಕ್ಕಬೇಕು, ಮತ್ತು ರಾಜಕೀಯ ಪ್ರಾತಿನಿಧ್ಯ ಸಿಕ್ಕಾಗಲೇ ಸಮುದಾಯದ ಬೇಡಿಕೆಗಳಿಗೆ ಬಲ ದಕ್ಕುತ್ತದೆ ಎಂದು ರಾಜಕಾರಣಿಗಳು ಭಾಷಣ ಮಾಡುತ್ತಾರೆ. ಆತನ ಸಂದೇಶಗಳು ಇಂದಿಗೂ ಅತ್ಯಂತ ಪ್ರಸ್ತುತ ಎಂದು ಸಾಹಿತಿಗಳು ತಮ್ಮ ಮಾತುಗಳನ್ನು ಪುನರಾವರ್ತಿಸುತ್ತಾರೆ. ಜನಸಾಮಾನ್ಯರ ಬದುಕು ತುಂಗಭದ್ರೆಯ ತಿಳಿನೀರಿನಂತೆಯೇ ಎಲ್ಲವನ್ನೂ ಉಪೇಕ್ಷಿಸುತ್ತಾ, ಮರೆಯುತ್ತಾ ಮುಂದೆ ಸಾಗುತ್ತದೆ.