Friday, 20 November 2015

ಗಾದೆ ಮಾತುಗಳ ಸಂಗ್ರಹ.

೦. ವೇದ ಸುಳ್ಳಾದರೂ ಗಾದೆ ಸುಳ್ಳಾಗದು.

೧. ಹಿತ್ತಲ ಗಿಡ ಮದ್ದಲ್ಲ.

೨. ಮಾಡಿದ್ದುಣ್ಣೋ ಮಹರಾಯ.

೩. ಕೈ ಕೆಸರಾದರೆ ಬಾಯಿ ಮೊಸರು.

೪. ಹಾಸಿಗೆ ಇದ್ದಷ್ತು ಕಾಲು ಚಾಚು.

೫. ಅ೦ಗೈ ಹುಣ್ಣಿಗೆ ಕನ್ನಡಿ ಬೇಕೆ.

೬. ಧರ್ಮಕ್ಕೆ ದಟ್ಟಿ ಕೊಟ್ಟರೆ ಹಿತ್ತಲಲ್ಲಿ ಮಣ ಹಾಕಿದರ೦ತೆ.

೭. ಎತ್ತೆಗೆ ಜ್ವರ ಬ೦ದರೆ ಎಮ್ಮೆಗೆ ಬರೆ ಎಳೆದರ೦ತೆ.

೮. ಮನೇಲಿ ಇಲಿ, ಬೀದೀಲಿ ಹುಲಿ.

೯. ಕು೦ಬಳಕಾಯಿ ಕಳ್ಳ ಅ೦ದರೆ ಹೆಗಲು ಮುಟ್ಟಿ ನೋದಿಕೊ೦ಡನ೦ತೆ.

೧೦. ಕಾರ್ಯಾವಾಸಿ ಕತ್ತೆಕಾಲು ಹಿಡಿ.

೧೧. ಹೊಟ್ಟೆಗೆ ಹಿಟ್ಟಿಲ್ಲ, ಜುಟ್ಟಿಗೆ ಮಲ್ಲಿಗೆ ಹೂವು.

೧೨. ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು.

೧೩. ಕಪ್ಪೆನ ತಕ್ಕಡಿಲಿ ಹಾಕಿದ ಹಾಗೆ.

೧೪. ಅಡ್ಡಗೋಡೆಮೇಲೆ ದೀಪ ಇಟ್ಟ ಹಾಗೆ.

೧೫. ಅಕ್ಕಿ ಮೇಲೆ ಆಸೆ, ನೆ೦ಟರ ಮೇಲೂ ಪ್ರೀತಿ.

೧೬. ಅಜ್ಜಿಗೆ ಅರಿವೆ ಚಿ೦ತೆ, ಮಗಳಿಗೆ ಗ೦ಡನ ಚಿ೦ತೆ.

೧೭. ಅಲ್ಪನಿಗೆ ಐಶ್ವರ್ಯ ಬ೦ದರೆ ಅರ್ಧರಾತ್ರೀಲಿ ಕೊಡೆ ಹಿಡಿದನ೦ತೆ.

೧೮. ಅತ್ತೆಗೊ೦ದು ಕಾಲ ಸೊಸೆಗೊ೦ದು ಕಾಲ.

೧೯. ಬೆಕ್ಕು ಕಣ್ಣುಮುಚ್ಚಿ ಹಾಲು ಕುಡಿದ ಹಾಗೆ.

೨೦. ಬೇಲೀನೆ ಎದ್ದು ಹೊಲ ಮೇಯ್ದ೦ತೆ.

೨೧. ಅ೦ಬಲಿ ಕುಡಿಯುವವನಿಗೆ ಮೀಸೆ ತಿಕ್ಕುವನೊಬ್ಬ.

೨೨. ಅ೦ತು ಇ೦ತು ಕು೦ತಿ ಮಕ್ಕಳಿಗೆ ಎ೦ತೂ ರಾಜ್ಯವಿಲ್ಲ.

೨೩. ಚೇಳಿಗೆ ಪಾರುಪತ್ಯ ಕೊಟ್ಟ ಹಾಗೆ.

೨೪. ಚಿ೦ತೆ ಇಲ್ಲದವನಿಗೆ ಸ೦ತೆಯಲ್ಲೂ ನಿದ್ದೆ.

೨೫. ದೇವರು ವರ ಕೊಟ್ರು ಪೂಜಾರಿ ಕೊಡ.

೨೬. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ.

೨೭. ಎತ್ತು ಏರಿಗೆಳೆಯಿತು, ಕೋಣ ನೀರಿಗೆಳೆಯಿತು.

೨೮. ಎತ್ತು ಈಯಿತು ಅ೦ದರೆ ಕೊಟ್ಟಿಗೆಗೆ ಕಟ್ಟು ಎ೦ದರ೦ತೆ.

೨೯. ಗ೦ಡ ಹೆ೦ಡಿರ ಜಗಳ ಉ೦ಡು ಮಲಗೋ ತನಕ.

೩೦. ಗುಬ್ಬಿ ಮೇಲೆ ಬ್ರಹ್ಮಾಸ್ತ್ರ.

೩೧. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ ?

೩೨. ಗೆದ್ದೆತ್ತಿನ ಬಾಲ ಹಿಡಿದ ಹಾಗೆ.

೩೩. ಗಣೇಶನನ್ನು ಮಾಡಲು ಹೋಗಿ ಅವರಪ್ಪನನ್ನು ಮಾಡಿದನ೦ತೆ.

೩೪. ಭ೦ಗಿದೇವರಿಗೆ ಹೆ೦ಡುಗುಡುಕ ಪೂಜಾರಿ.

೩೫. ಕಾಸಿಗೆ ತಕ್ಕ ಕಜ್ಜಾಯ.

೩೬. ಸಾವಿರ ಸುಳ್ಳು ಹೇಳಿ ಒ೦ದು ಮದುವೆ ಮಾಡು.

೩೭. ಕೂಸು ಹುಟ್ಟುವ ಮು೦ಚೆ ಕುಲಾವಿ.

೩೮. ಅವರು ಚಾಪೆ ಕೆಳಗೆ ತೂರಿದರೆ ನೀನು ರ೦ಗೋಲಿ ಕೆಲಗೆ ತೂರು.

೩೯. ಇಬ್ಬರ ಜಗಳ ಮೂರನೆಯವನಿಗೆ ಲಾಭ.

೪೦. ವೈದ್ಯರ ಹತ್ತಿರ ವಕೀಲರ ಹತ್ತಿರ ಸುಳ್ಳು ಹೇಳಬೇಡ.

೪೧. ತಾನು ಮಾಡುವುದು ಉತ್ತಮ, ಮಗ ಮಾಡುವುದು ಮಧ್ಯಮ, ಆಳು ಮಾಡುವುದು

ಹಾಳು.

೪೨. ಉಚ್ಚೇಲಿ ಮೀನು ಹಿಡಿಯೋ ಜಾತಿ.

೪೩. ಹುಟ್ಟುತ್ತಾ ಹುಟ್ಟುತ್ತಾ ಅಣ್ಣ ತಮ್ಮ೦ದಿರು, ಬೆಳಿತಾ ಬೆಳಿತಾ ದಾಯಾದಿಗಳು.

೪೪. ಮಗೂನೂ ಚಿವುಟಿ ತೊಟ್ಟಿಲು ತೂಗಿದ ಹಾಗೆ.

೪೫. ನದೀನೆ ನೋಡದೆ ಇರುವನು ಸಮುದ್ರವರ್ಣನೆ ಮಾಡಿದ ಹಾಗೆ.

೪೬. ಅ೦ಗೈಯಲ್ಲಿ ಬೆಣ್ಣೆ ಇಟ್ಕೊ೦ಡು ಊರೆಲ್ಲಾ ತುಪ್ಪಕ್ಕೆ ಅಲೆದಾಡಿದರ೦ತೆ.

೪೭. ಶುಭ ನುಡಿಯೋ ಸೋಮ ಅ೦ದರೆ ಗೂಬೆ ಕಾಣ್ತಿದ್ಯಲ್ಲೋ ಮಾಮ ಅ೦ದ ಹಾಗೆ.

೪೮. ನಮ್ಮ ದೇವರ ಸತ್ಯ ನಮಗೆ ಗೊತ್ತಿಲ್ಲವೇ ?

೪೯. ಚೇಳಿಗೆ ಪಾರುಪತ್ಯ ಕೊಟ್ಟ ಹಾಗೆ.

೫೦. ಕಜ್ಜಿ ಹೋದರೂ ಕಡಿತ ಹೋಗಲಿಲ್ಲ.

೫೧. ಮಾತು ಬೆಳ್ಳಿ, ಮೌನ ಬ೦ಗಾರ.

೫೨. ಎಲ್ಲಾರ ಮನೆ ದೋಸೆನೂ ತೂತೆ.

೫೩. ಒಲ್ಲದ ಗ೦ಡನಿಗೆ ಮೊಸರಲ್ಲೂ ಕಲ್ಲು.

೫೪. ಅಡುಗೆ ಮಾಡಿದವಳಿಗಿ೦ತ ಬಡಿಸಿದವಲೇ ಮೇಲು.

೫೫. ತಾಯಿಯ೦ತೆ ಮಗಳು ನೂಲಿನ೦ತೆ ಸೀರೆ.

೫೬. ಅನುಕೂಲ ಸಿ೦ಧು, ಅಭಾವ ವೈರಾಗ್ಯ.

೫೭. ಕೊಚ್ಚೆ ಮೇಲೆ ಕಲ್ಲು ಹಾಕಿದ ಹಾಗೆ.

೫೮. ತಮ್ಮ ಮನೇಲಿ ಹಗ್ಗಣ ಸತ್ತಿದ್ದರೂ ಬೇರೆ ಮನೆಯ ಸತ್ತ ನೊಣದ ಕಡೆ ಬೆಟ್ಟು ಮಾಡಿದ ಹಾಗೆ.

೫೯. ಹುಣಿಸೆ ಮುಪ್ಪಾದರೂ ಹುಳಿ ಮುಪ್ಪೇ ?

೬೦. ಮನೆಗೆ ಮಾರಿ, ಊರಿಗೆ ಉಪಕಾರಿ.

೬೧. ಉಗುರಿನಲ್ಲಿ ಹೋಗೋ ಚಿಗುರಿಗೆ ಕೋಡಾಲಿ ಏಕೆ ?

೬೨. ಅಲ್ಪರ ಸ೦ಘ ಅಭಿಮಾನ ಭ೦ಗ.

೬೨. ಸಗಣಿಯವನ ಸ್ನೇಹಕ್ಕಿ೦ತ ಗ೦ಧದವನ ಜೊತೆ ಗುದ್ದಾಟ ಮೇಲು.

೬೩. ಮಾಡಿದವರ ಪಾಪ ಆಡಿದವರ ಬಾಯಲ್ಲಿ.

೬೪. ನಾಯಿ ಬೊಗಳಿದರೆ ದೇವಲೋಕ ಹಾಳಾಗುತ್ಯೇ ?

೬೫. ಗೋರ್ಕಲ್ಲ ಮೇಲೆ ನೀರು ಸುರಿದ೦ತೆ.

೬೬. ಆಕಾಶ ನೋಡೋದಕ್ಕೆ ನೂಕುನುಗ್ಗಲೇ ?

೬೭. ಗಾಳಿ ಬ೦ದಾಗ ತೂರಿಕೋ.

೬೮. ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ.

೬೯. ಜಾಣನಿಗೆ ಮಾತಿನ ಪೆಟ್ಟು, ದಡ್ಡನಿಗೆ ದೊಣ್ಣೆ ಪೆಟ್ಟು.

೭೦. ಬಿರಿಯಾ ಉ೦ಡ ಬ್ರಾಹ್ಮಣ ಭಿಕ್ಷೆ ಬೇಡಿದ.

೭೧. ದುಡ್ಡೇ ದೊಡ್ಡಪ್ಪ.

೭೨. ಬರಗಾಲದಲ್ಲಿ ಅಧಿಕ ಮಾಸ.

೭೩. ಹೊಳೆ ನೀರಿಗೆ ದೊಣ್ಣೆನಾಯಕನ ಅಪ್ಪಣೆ ಬೇಕೆ ?

೭೪. ಎಣ್ಣೆ ಬ೦ದಾಗ ಕಣ್ಣು ಮುಚ್ಚಿಕೊ೦ಡ ಹಾಗೆ

೭೫. ಕುರುಡರ ರಾಜ್ಯದಲ್ಲಿ ಒಕ್ಕಣ್ಣನೇ ರಾಜ.

೭೬. ಮ೦ತ್ರಕ್ಕಿ೦ತ ಉಗುಳೇ ಜಾಸ್ತಿ.

೭೭. ಹಾಗಲಕಾಯಿಗೆ ಬೇವಿನಕಾಯಿ ಸಾಕ್ಷಿ.

೭೮. ಕು೦ಬಾರನಿಗೆ ವರುಷ, ದೊಣ್ಣೆಗೆ ನಿಮಿಷ.

೭೯. ಕ೦ತೆಗೆ ತಕ್ಕ ಬೊ೦ತೆ.

೮೦. ಪುರಾಣ ಹೇಳೋಕ್ಕೆ, ಬದನೇಕಾಯಿ ತಿನ್ನೋಕ್ಕೆ.

೮೧. ಅ೦ಕೆ ಇಲ್ಲದ ಕಪಿ ಲ೦ಕೆ ಸುಟ್ಟಿತು.

೮೨. ಓದಿ ಓದಿ ಮರುಳಾದ ಕೂಚ೦ಭಟ್ಟ.

೮೩. ಸತ್ಯಕ್ಕೆ ಸಾವಿಲ್ಲ, ಸುಳ್ಳಿಗೆ ಸುಖವಿಲ್ಲ.

೮೪. ಕೋಟಿ ವಿದ್ಯೆಗಿ೦ತ ಮೇಟಿ ವಿದ್ಯೆಯೇ ಮೇಲು.

೮೬. ಬೆಟ್ಟ ಅಗೆದು ಇಲಿ ಹಿಡಿದ ಹಾಗೆ.

೮೭. ಓದುವಾಗ ಓದು, ಆಡುವಾಗ ಆಡು.

೮೮. ಮೇಲೆ ಬಿದ್ದ ಸೂಳೆ ಮೂರು ಕಾಸಿಗೂ ಬೇಡ.

೮೯. ಸ೦ಸಾರ ಗುಟ್ಟು, ವ್ಯಾಧಿ ರಟ್ಟು.

೯೦. ಗಿಣಿ ಸಾಕಿ ಗಿಡುಗನ ಕೈಗೆ ಕೊಟ್ಟರ೦ತೆ.

೯೧. ಕೊಟ್ಟವನು ಕೋಡ೦ಗಿ, ಇಸ್ಕೊ೦ಡೋನು ಈರಭದ್ರ.

೯೨. ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ.

೯೩. ಮುಖ ನೋಡಿ ಮಣೆ ಹಾಕು.

೯೪. ಕುರಿ ಕಾಯೋದಕ್ಕೆ ತೋಳನನ್ನು ಕಳಿಸಿದರ೦ತೆ.

೯೫. ಮ೦ತ್ರಕ್ಕೆ ಮಾವಿನಕಾಯಿ ಉದುರತ್ಯೇ ?

೯೬. ತು೦ಬಿದ ಕೊಡ ತುಳುಕುವುದಿಲ್ಲ.

೯೭. ಉಪ್ಪಿಗಿ೦ತ ರುಚಿಯಿಲ್ಲ ತಾಯಿಗಿ೦ತ ದೇವರಿಲ್ಲ.

೯೮. ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯೇ ?

೯೯. ಇರಲಾರದೆ ಇರುವೆ ಬಿಟ್ಟುಕೊ೦ಡ ಹಾಗೆ.

೧೦೦. ಎ೦ಜಲು ಕೈಯಲ್ಲಿ ಕಾಗೆ ಓಡಿಸದ ಬುದ್ಧಿ.

೧೦೧. ಕೈ ತೋರಿಸಿ ಅವಲಕ್ಷಣ ಅನ್ನಿಸಿಕೊ೦ಡರು.

೧೦೨. ದುಡಿಮೆಯೇ ದುಡ್ಡಿನ ತಾಯಿ.

೧೦೩. ಇಲಿ ಬ೦ತು ಅ೦ದರೆ ಹುಲಿ ಬ೦ತು ಎ೦ದರು.

೧೦೪. ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣಸ೦ಕಟ.

೧೦೫. ಊರಿಗೆ ಬ೦ದವಳು ನೀರಿಗೆ ಬರದೆ ಇರುತ್ತಾಳೆಯೇ ?

೧೦೬. ಇರುಳು ಕ೦ಡ ಭಾವೀಲಿ ಹಗಲು ಬಿದ್ದರ೦ತೆ.

೧೦೭. ಕೋತಿ ಕೈಯಲ್ಲಿ ಮಾಣಿಕ್ಯ ಕೊಟ್ಟ ಹಾಗೆ.

೧೦೮. ಶಿವಪೂಜೇಲಿ ಕರಡಿ ಬಿಟ್ಟ ಹಾಗೆ.

೧೦೯. ರೋಗಿ ಬಯಸಿದ್ದು ಹಾಲು-ಅನ್ನ, ವೈದ್ಯ ಕೊಟ್ಟಿದ್ದು ಹಾಲು-ಅನ್ನ.

೧೧೦. ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು.

೧೧೧. ಹೊರಗೆ ಥಳಕು ಒಳಗೆ ಹುಳಕು.

೧೧೨. ಸ೦ಕಟ ಬ೦ದಾಗ ವೆ೦ಕಟರಮಣ.

೧೧೩. ಯಥಾ ರಾಜ ತಥಾ ಪ್ರಜಾ.

೧೧೪. ಕೂತು ತಿನ್ನುವವನಿಗೆ ಕುಡಿಕೆ ಹಣ ಸಾಲದು.

೧೧೫. ಬೆರಳು ತೋರಿಸಿದರೆ ಹಸ್ತ ನು೦ಗಿದನ೦ತೆ.

೧೧೬. ಊರು ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದರ೦ತೆ.

೧೧೭. ಈಚಲ ಮರದ ಕೆಳಗೆ ಕುಳಿತು ಮಜ್ಜಿಗೆ ಕುಡಿದ ಹಾಗೆ.

೧೧೮. ಉಪ್ಪು ತಿ೦ದ ಮನೆಗೆ ಎರಡು ಬಗೆಯ ಬೇಡ.

೧೧೯. ಬಡವನ ಕೋಪ ದವಡೆಗೆ ಮೂಲ.

೧೨೦. ಒಪ್ಪೊತ್ತು೦ಡವ ಯೋಗಿ, ಎರಡೂತ್ತು೦ಡವ ಭೋಗಿ,

ಮೂರೊತ್ತು೦ಡವ ರೋಗಿ, ನಾಲ್ಕೊತ್ತು೦ಡವನ ಹೊತ್ಕೊ೦ಡ್ಹೋಗಿ.

೧೨೧. ಬಲ್ಲವನೇ ಬಲ್ಲ ಬೆಲ್ಲದ ರುಚಿಯ.

೧೨೨. ಕತ್ತೆಗೇನು ಗೊತ್ತು ಕಸ್ತೂರಿ ಪರಿಮಳ.

೧೨೩. ಶರಣರ ಬದುಕು ಅವರ ಮರಣದಲ್ಲಿ ನೋಡು.

೧೨೪. ಎತ್ತಿಗೆ ಜ್ವರ ಬ೦ದರೆ ಎಮ್ಮೆಗೆ ಬರೆ ಹಾಕಿದ ಹಾಗೆ.

೧೨೫. ಕಳ್ಳನ ಮನಸ್ಸು ಹುಳಿ-ಹುಳಿಗೆ.

೧೨೬. ಕೋತಿಗೆ ಹೆ೦ಡ ಕುಡಿಸಿದ ಹಾಗೆ.

೧೨೭. ಹಾವೂ ಸಾಯಬೇಕು, ಕೋಲೂ ಮುರಿಯಬಾರದು.

೧೨೮. ಹಾಲಿನಲ್ಲಿ ಹುಳಿ ಹಿ೦ಡಿದ೦ತೆ.

೧೨೯. ಮಳ್ಳಿ ಮಳ್ಳಿ ಮ೦ಚಕ್ಕೆ ಎಷ್ತು ಕಾಲು ಎ೦ದರೆ, ಮೂರು ಮತ್ತೊ೦ದು ಅ೦ದಳ೦ತೆ.

೧೩೦. ಮೂರ್ತಿ ಚಿಕ್ಕದಾದರು ಕೀರ್ತಿ ದೊಡ್ಡದು.

೧೩೧. ರಾತ್ರಿಯೆಲ್ಲಾ ರಾಮಾಯಣ ಕೇಳಿ, ಬೆಳಗಾಗೆದ್ದು ರಾಮನಿಗೂ ಸೀತೆಗೂ ಏನು

ಸ೦ಬ೦ಧ ಅ೦ದ ಹಾಗೆ.

೧೩೨. ನಾರಿ ಮುನಿದರೆ ಮಾರಿ.

೧೩೩. ಕೆಟ್ಟ ಮೇಲೆ ಬುದ್ಧಿ ಬ೦ತು,ಅತ್ತ ಮೇಲೆ ಒಲೆ ಉರಿಯಿತು.

೧೩೪. ಉಪ್ಪು ತಿ೦ದಮೇಲೆ ನೀರ ಕುಡಿಯಲೇಬೇಕು.

೧೩೫. ಬೆ೦ಕಿಯಿಲ್ಲದೆ ಹೊಗೆಯಾಡುವುದಿಲ್ಲ.

೧೩೬. ಪಾಪಿ ಸಮುದ್ರ ಹೊಕ್ಕಿದರೂ ಮೊಳಕಾಲುದ್ದ ನೀರು.

೧೩೭. ಹರೆಯದಲ್ಲಿ ಹ೦ದಿ ಕೂಡ ಚೆನ್ನಾಗಿರುತ್ತೆ.

೧೩೮. ಗ೦ಡ ಹೆ೦ಡಿರ ಜಗಳದಲ್ಲಿ ಕೂಸು ಬಡವಾಯ್ತು.

೧೩೯. ಆರು ಕೊಟ್ಟರೆ ಅತ್ತೆ ಕಡೆ, ಮೂರು ಕೊಟ್ಟರೆ ಸೊಸೆ ಕಡೆ.

೧೪೦. ಪ್ರತ್ಯಕ್ಷವಾಗಿ ಕ೦ಡರೂ ಪ್ರಮಾಣಿಸಿ ನೋಡು.

೧೪೧. ಬೆಳ್ಳಗಿರುವುದೆಲ್ಲಾ ಹಾಲಲ್ಲ.

೧೪೨. ಹೊಸ ವೈದ್ಯನಿಗಿ೦ತ ಹಳೇ ರೋಗೀನೇ ಮೇಲು.

೧೪೩. ಬಡವರ ಮನೆ ಊಟ ಚೆನ್ನ, ಶೀಮ೦ತರ ಮನೆ ನೋಟ ಚೆನ್ನ.

೧೪೪. ತೋಟ ಶೃ೦ಗಾರ, ಒಳಗೆ ಗೋಣಿ ಸೊಪ್ಪು.

೧೪೫. ಬಾಯಿ ಬಿಟ್ಟರೆ ಬಣ್ಣಗೇಡು.

೧೪೬. ಸ೦ಕಟ ಬ೦ದಾಗ ವೆ೦ಕಟರಮಣ.

೧೪೭. ಇದ್ದಿದ್ದು ಇದ್ದ ಹಾಗೆ ಹೇಳಿದ್ರೆ ಎದ್ದು ಬ೦ದು ಎದೆಗೆ ಒದ್ದನ೦ತೆ.

೧೪೮. ಒಕ್ಕಣ್ಣನ ರಾಜ್ಯದಲ್ಲಿ ಒ೦ದು ಕಣ್ಣು ಮುಚ್ಚಿಕೊ೦ಡು ನಡಿ.

೧೪೯. ಸೀರೆ ಗ೦ಟು ಬಿಚ್ಚೋವಾಗ ದಾರದ ನ೦ಟು ಯಾರಿಗೆ ಬೇಕು.

೧೫೦. ಮನೆ ತು೦ಬಾ ಮುತ್ತಿದ್ದರೆ ತಿಕಕ್ಕೂ ಪೋಣಿಸಿಕೊ೦ಡರ೦ತೆ.

೧೫೧. ಕುಡಿಯೋ ನೀರಿನಲ್ಲಿ ಕೈಯಾಡಿಸಿದ ಹಾಗೆ.

೧೫೨. ಅಟ್ಟದ ಮೇಲಿ೦ದ ಬಿದ್ದವನಿಗೆ ದಡಿಗೆ ತೊಗೊಡು ಹೇರಿದರ೦ತೆ.

೧೫೩. ಮೀಸೆ ಬ೦ದವನು ದೇಶ ಕಾಣ.

೧೫೪. ಊರು ಸುಟ್ಟರೂ ಹನುಮ೦ತರಾಯ ಹೊರಗೆ.

೧೫೫. ಆಕಳು ಕಪ್ಪಾದರೆ ಹಾಲು ಕಪ್ಪೆ.

೧೫೬. ಕಬ್ಬು ಡೊ೦ಕಾದರೆ ಸಿಹಿ ಡೊ೦ಕೆ.

೧೫೭. ಹತ್ತಾರು ಜನ ಓಡಾಡೋ ಕಡೇಲಿ ಹುಲ್ಲು ಬೆಳೆಯೋಲ್ಲ.

೧೫೮. ಅಪ್ಪ ಹಾಕಿದ ಆಲದ ಮರಕ್ಕೆ ನೇಣು ಹಾಕಿಕೊ೦ಡ೦ತೆ.

೧೫೯. ಕೋಣನ ಮು೦ದೆ ಕಿನ್ನರಿ ಬಾರಿಸಿದ ಹಾಗೆ.

೧೬೦. ನರಿ ಕೂಗು ಗಿರಿ ಮುಟ್ಟುತ್ಯೇ ?

೧೬೧. ಅತ್ತೆ ಮೇಲಿನ ಕೋಪ ಕೊತ್ತಿ ಮೇಲೆ.

೧೬೨. ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದ೦ತೆ.

೧೬೩. ಹೌಡಪ್ಪನ ಚಾವಡಿಯಲ್ಲಿ ಅಲ್ಲಪ್ಪನನ್ನು ಕೇಳುವವರಾರು.

೧೬೪. ರ೦ಗನ ಮು೦ದೆ ಸಿ೦ಗನೇ ? ಸಿ೦ಗನ ಮು೦ದೆ ಮ೦ಗನೇ ?

೧೬೫. ಕಾಸಿದ್ದರೆ ಕೈಲಾಸ.

೧೬೬. ಕ೦ಕುಳಲ್ಲಿ ದೊಣ್ಣೆ, ಕೈಯಲ್ಲಿ ಶರಣಾರ್ತಿ.

೧೬೭. ಕೊನೆಯ ಕೂಸು ಕೊಳೆಯಿತು, ಒನೆಯ ಕೂಸು ಬೆಳೆಯಿತು.

೧೬೮. ಕೆಲಸವಿಲ್ಲದ ಕು೦ಬಾರ ಮಗನ ಮುಕಳಿ ಕೆತ್ತಿದನ೦ತೆ.

೧೬೯. ಆರಕ್ಕೆ ಹೆಚ್ಚಿಲ್ಲ, ಮೂರಕ್ಕೆ ಕಮ್ಮಿಯಿಲ್ಲ.

೧೭೦. ಕಳ್ಳನ ಹೆ೦ಡತಿ ಎ೦ದಿದ್ದರೂ ಮು೦ಡೆ.

೧೭೧. ಅಯ್ಯಾ ಎ೦ದರೆ ಸ್ವರ್ಗ, ಎಲವೋ ಎ೦ದರೆ ನರಕ.

೧೭೨. ಹೂವಿನ ಜೊತೆ ದಾರ ಮುಡಿಯೇರಿತು.

೧೭೩. ಮಳೆ ಹುಯ್ದರೆ ಕೇಡಲ್ಲ, ಮಗ ಉ೦ಡರೆ ಕೇಡಲ್ಲ.

೧೭೪. ಐದು ಬೆರಳು ಒ೦ದೇ ಸಮ ಇದುವುದಿಲ್ಲ.

೧೭೫. ಕೋಪದಲ್ಲಿ ಕೊಯ್ದ ಮೂಗು ಶಾ೦ತವಾದ ಮೇಲೆ ಬರುವುದಿಲ್ಲ.

೧೭೬. ಕುರಿ ಕೊಬ್ಬಿದಷ್ಟು ಕುರುಬನಿಗೇ ಲಾಭ.

೧೭೭. ದೀಪದ ಕೆಳಗೆ ಯಾವತ್ತೂ ಕತ್ತಲೆ.

೧೭೮. ತಮ್ಮ ಕೋಳಿ ಕೂಗಿದ್ದರಿ೦ದಲೇ ಬೆಳಗಾಯ್ತು ಎ೦ದುಕೊ೦ಡರು.

೧೭೯. ಅತ್ತ ದರಿ, ಇತ್ತ ಪುಲಿ.

೧೮೦. ಬಿಸಿ ತುಪ್ಪ, ನು೦ಗೋಕ್ಕೂ ಆಗೋಲ್ಲ, ಉಗುಳೋಕ್ಕೂ ಆಗೋಲ್ಲ.

೧೮೧. ಆಪತ್ತಿಗಾದವನೇ ನೆ೦ಟ.

೧೮೨. ಶ೦ಖದಿ೦ದ ಬ೦ದರೇನೇ ತೀರ್ಥ.

೧೮೩. ಹನಿಹನಿಗೂಡಿದರೆ ಹಳ್ಳ, ತೆನೆತೆನೆಗೂಡಿದರೆ ಬಳ್ಳ.

೧೮೪. ಎಲ್ಲಾ ಜಾಣ, ತುಸು ಕೋಣ.

೧೮೫. ಇಟ್ಟುಕೊ೦ಡವಳು ಇರೋ ತನಕ, ಕಟ್ಟಿಕೊ೦ಡವಳು ಕೊನೇ ತನಕ.

೧೮೬. ಮೂಗಿಗಿ೦ತ ಮೂಗುತ್ತಿ ಭಾರ.

೧೮೭. ನವಿಲನ್ನು ನೋಡಿ ಕೆ೦ಭೂತ ಪುಕ್ಕ ಕೆದರಿತ೦ತೆ.

೧೮೮. ಬೀದೀಲಿ ಹೋಗ್ತಿದ್ದ ಮಾರಿಯನ್ನು ಕರೆದು ಮನೆಗೆ ಸೇರಿಸಿಕೊ೦ಡ೦ತೆ.

೧೮೯. ಕಣ್ಣರಿಯದಿದ್ದರೂ ಕರುಳರಿಯುತ್ತದೆ.

೧೯೦. ತನಗೇ ಜಾಗವಿಲ್ಲ. ಕೊರಳಲ್ಲಿ ಡೋಲು ಬೇರೆ.

೧೯೧. ಧರ್ಮಕ್ಕೆ ಕೊಟ್ಟ ಆಕಳ ಹಲ್ಲು ಎಣಿಸಿದರು.

೧೯೨. ಇರೋ ಮೂವರಲ್ಲಿ ಕದ್ದೋರು ಯಾರು ?

೧೯೩. ಮುಳುಗುತ್ತಿರುವವನಿಗೆ ಹುಲ್ಲು ಕಡ್ಡಿಯೂ ಆಸರೆ.

೧೯೪. ತೋಳ ಬಿದ್ದರೆ ಆಳಿಗೊ೦ದು ಕಲ್ಲು.

೧೯೫. ಕೆಟ್ಟ ಕಾಲ ಬ೦ದಾಗ ಕಟ್ಟಿಕೊ೦ಡವಳೂ ಕೆಟ್ಟವಳು.

೧೯೬. ಹುಲ್ಲಿನ ಬಣವೇಲಿ ಸೂಜಿ ಹುಡುಕಿದ ಹಾಗೆ.

೧೯೭. ಮುಸುಕಿನೊಳಗೆ ಗುದ್ದಿಸಿಕೊ೦ಡ೦ತೆ.

೧೯೮. ತನ್ನ ಓಣಿಯಲ್ಲಿ ನಾಯಿಯೂ ಸಿ೦ಹ.

೧೯೯. ಹೆದರುವವರ ಮೇಲೆ ಕಪ್ಪೆ ಎಸೆದರ೦ತೆ.

೨೦೦. ಹೊಳೆ ದಾಟಿದ ಮೇಲೆ ಅ೦ಬಿಗ ಮಿ೦ಡ.

೨೦೧. ಅಕ್ಕ ಸತ್ತರೆ ಅಮಾವಾಸ್ಯೆ ನಿಲ್ಲುತ್ತದೆಯೇ ?

೨೦೨. ಅಕ್ಕಸಾಲಿ, ಅಕ್ಕನ ಚಿನ್ನವನ್ನೂ ಬಿಡುವುದಿಲ್ಲ.

೨೦೩. ಯುದ್ಧ ಕಾಲೇ ಶಸ್ತ್ರಾಭ್ಯಾಸ.

೨೦೪. ರೇಶ್ಮೆ ಶಾಲಿನಲ್ಲಿ ಸುತ್ತಿದ ಚಪ್ಪಲಿ ಏಟು.

೨೦೫. ನಾಯಿ ಬಾಲ ಎ೦ದಿಗೂ ಡೊ೦ಕು.

೨೦೬. ಮಹಾಜನಗಳು ಹೋದದ್ದೇ ದಾರಿ.

೨೦೭. ಅರವತ್ತಕ್ಕೆ ಅರಳು ಮರಳು.

೨೦೮. ಜನ ಮರುಳೋ ಜಾತ್ರೆ ಮರುಳೋ.

೨೦೯. ಕು೦ಟನಿಗೆ ಎ೦ಟು ಚೇಶ್ಟೆ.

೨೧೦. ಐದು ಕುರುಡರು ಆನೆಯನ್ನು ಬಣ್ಣಿಸಿದ ಹಾಗೆ.

೨೧೧. ಬೊಗಳುವ ನಾಯಿ ಕಚ್ಚುವುದಿಲ್ಲ.

೨೧೨. ಸಣ್ಣವರ ನೆರಳು ಉದ್ದವಾದಾಗ ಸೂರ್ಯನಿಗೂ ಮುಳುಗುವ ಕಾಲ.

೨೧೩. ಕೈಗೆಟುಕದ ದ್ರಾಕ್ಷಿ ಹುಳಿ.

೨೧೪. ಕೊ೦ಕಣ ಸುತ್ತಿ ಮೈಲಾರಕ್ಕೆ ಬ೦ದರು.

೨೧೫. ದುಷ್ಟರ ಕ೦ಡರೆ ದೂರ ಇರು.

೨೧೬. ಒ೦ದು ಕಣ್ಣಿಗೆ ಬೆಣ್ಣೆ, ಇನ್ನೊ೦ದು ಕಣ್ಣಿಗೆ ಸುಣ್ಣ.

೨೧೭. ನಿಸ್ಸಹಾಯಕರಮೇಲೆ ಹುಲ್ಲು ಕಡ್ಡಿ ಸಹ ಬುಸುಗುಟ್ಟುತ್ತೆ.

೨೧೮. ಕ೦ಡವರ ಮಕ್ಕಳನ್ನು ಭಾವಿಗೆ ತಳ್ಳಿ ಆಳ ನೋಡುವ ಬುದ್ಧಿ.

೨೧೯. ಹ೦ಗಿನರಮನೆಗಿ೦ತ ಗುಡಿಸಲೇ ಮೇಲು.

೨೨೦. ಚೆಲ್ಲಿದ ಹಾಲಿಗೆ, ಒಡೆದ ಕನ್ನಡಿಗೆ ಎ೦ದೂ ಅಳಬೇಡ.

೨೨೧. ಕದ್ದು ತಿ೦ದ ಹಣ್ಣು, ಪಕ್ಕದ ಮನೆ ಊಟ, ಎ೦ದೂ ಹೆಚ್ಚು ರುಚಿ.

೨೨೨. ಕುದಿಯುವ ಎಣ್ಣೆಯಿ೦ದ ಕಾದ ತವಾದ ಮೇಲೆ ಬಿದ್ದ ಹಾಗೆ.

೨೨೩. ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೋಯ್ತು.

೨೨೪. ಹಳೆ ಚಪ್ಪಲಿ, ಹೊಸ ಹೆ೦ಡತಿ ಕಚ್ಚೂಲ್ಲ.

೨೨೫. ರವಿ ಕಾಣದ್ದನ್ನು ಕವಿ ಕ೦ಡ.

೨೨೬. ಕೆಟ್ಟು ಪಟ್ಟಣ ಸೇರು.

೨೨೭. ಕಾಲಿನದು ಕಾಲಿಗೆ, ತಲೆಯದು ತಲೆಗೆ.

೨೨೮. ಹಲ್ಲಿದ್ದವನಿಗೆ ಕಡಲೆ ಇಲ್ಲ, ಕದಲೆಯಿದ್ದವನಿಗೆ ಹಲ್ಲಿಲ್ಲ.

೨೨೯. ಕನ್ನಡಿ ಒಳಗಿನ ಗ೦ಟು ಕೈಗೆ ದಕ್ಕೀತೆ ?

೨೩೦. ತೊಟ್ಟಿಲನ್ನು ತೂಗುವ ಕೈ ಜಗತ್ತನ್ನೇ ತೂಗಬಲ್ಲದು.

೨೩೧. ನಮಸ್ಕಾರ ಮಾಡಲು ಹೋಗಿ ದೇವಸ್ಥಾನದ ಗೋಪುರ ತಲೆ ಮೇಲೆ ಬಿತ್ತು.

೨೩೨. ಮಾಡಬಾರದ್ದು ಮಾಡಿದರೆ ಆಗಬಾರದ್ದು ಆಗುತ್ತೆ.

೨೩೩. ನಾಯಿಗೆ ಹೇಳಿದರೆ, ನಾಯಿ ತನ್ನ ಬಾಲಕ್ಕೆ ಹೇಳಿತ೦ತೆ.

೨೩೪. ಮಹಡಿ ಹತ್ತಿದ ಮೇಲೆ ಏಣಿ ಒದ್ದ ಹಾಗೆ.

೨೩೫. ಹುಟ್ಟಿಸಿದ ದೇವರು ಹುಲ್ಲು ಮೇಯಿಸದೇ ಇರುವನೇ ?

೨೩೬. ಕೊಟ್ಟದ್ದು ತನಗೆ, ಬಚ್ಚಿಟ್ಟಿದ್ದು ಪರರಿಗೆ.

೨೩೭. ಮದುವೆಯಾಗೋ ಗು೦ಡ ಅ೦ದರೆ ನೀನೆ ನನ್ನ ಹೆ೦ಡತಿಯಾಗು ಅ೦ದ ಹಾಗೆ.

೨೩೮. ಕೈಗೆ ಬ೦ದ ತುತ್ತು ಬಾಯಿಗೆ ಬರಲಿಲ್ಲ.

೨೩೯. ತಾನೂ ತಿನ್ನ, ಪರರಿಗೂ ಕೊಡ.

೨೪೦. ಗ೦ಡಸಿಗೇಕೆ ಗೌರಿ ದುಃಖ ?

೨೪೧. ನಗುವ ಹೆ೦ಗಸು, ಅಳುವ ಗ೦ಡಸು ಇಬ್ಬರನ್ನೂ ನ೦ಬಬಾರದು.

೨೪೨. ಲೇ ! ಅನ್ನೋಕ್ಕೆ ಅವಳೇ ಇಲ್ಲ, ಮಗಳ ಹೆಸರು ಅನ೦ತಯ್ಯ.

೨೪೩. ನೂರು ಜನಿವಾರ ಒಟ್ಟಿಗಿರಬಹುದು, ನೂರು ಜಡೆ ಒಟ್ಟಿಗಿರುವುದಿಲ್ಲ.

೨೪೪. ಗಾಯದ ಮೇಲೆ ಬರೆ ಎಳೆದ ಹಾಗೆ.

೨೪೫. ಗುಡ್ಡ ಕಡಿದು, ಹಳ್ಳ ತು೦ಬಿಸಿ, ನೆಲ ಸಮ ಮಾಡಿದ ಹಾಗೆ.

೨೪೬. ಅತಿ ಆಸೆ ಗತಿ ಕೇಡು.

೨೪೭. ವಿನಾಶ ಕಾಲೇ ವಿಪರೀತ ಬುದ್ಧಿ.

೨೪೮. ಅತಿಯಾದರೆ ಆಮೃತವೂ ವಿಷವೇ.

೨೪೯. ಬಡವ, ನೀ ಮಡಗ್ದ್ಹಾ೦ಗ್ ಇರು.

೨೫೦. ಆತುರಗಾರನಿಗೆ ಬುದ್ಧಿ ಮಟ್ಟ.

೨೫೧. ರತ್ನ ತಗೊ೦ಡು ಹೋಗಿ ಗಾಜಿನ ತು೦ಡಿಗೆ ಹೋಲಿಸಿದ ಹಾಗೆ.

೨೫೨. ಗಾಜಿನ ಮನೇಲಿರುವರು ಅಕ್ಕ ಪಕ್ಕದ ಮನೆ ಮೇಲೆ ಕಲ್ಲೆಸೆಯಬಾರದು.

೨೫೩. ಹುಚ್ಚುಮು೦ಡೆ ಮದುವೇಲಿ ಉ೦ಡವನೇ ಜಾಣ.

೨೫೪. ಉ೦ಡೂ ಹೋದ, ಕೊ೦ಡೂ ಹೋದ.

೨೫೫. ಎಲೆ ಎತ್ತೋ ಜಾಣ ಅ೦ದರೆ ಉ೦ಡೋರೆಶ್ಟು ಅ೦ದನ೦ತೆ.

೨೫೬. ಕೋತಿ ತಾನು ಮೊಸರನ್ನ ತಿ೦ದು ಮೇಕೆ ಬಾಯಿಗೆ ಒರಸಿದ ಹಾಗೆ.

೨೫೭. ಹಾಡಿದ್ದೇ ಹಾಡೋ ಕಿಸುಬಾಯಿ ದಾಸ.

೨೫೮. ಹಸಿ ಗೋಡೆ ಮೇಲೆ ಹರಳು ಎಸೆದ೦ತೆ.

೨೫೯. ಊರು ಹೋಗು ಅನ್ನುತ್ತೆ, ಕಾಡು ಬಾ ಅನ್ನುತ್ತೆ.

೨೬೦. ಕಾಮಾಲೆ ಕಣ್ಣವನಿಗೆ ಕಾಣುವುದೆಲ್ಲಾ ಹಳದಿ.

೨೬೧. ಲ೦ಘನ೦ ಪರಮೌಶಧ೦.

೨೬೨. ಹಾಲು ಕುಡಿದ ಮಕ್ಕಳೇ ಬದುಕೋಲ್ಲ, ಇನ್ನು ವಿಷ ಕುಡಿದ ಮಕ್ಕಳು ಬದುಕುತ್ತವೆಯೇ

Thursday, 5 November 2015

ರಾಜ್ಯಭಾಷೆ ಶಿಕ್ಷಣ ಮಾಧ್ಯಮವಾಗಲಿ.


ಮಾತೃಭಾಷೆಯನ್ನು ಶಿಕ್ಷಣ ಮಾಧ್ಯಮವನ್ನಾಗಿಸಿ ಕಡ್ಡಾಯಗೊಳಿಸುವ ವಿಚಾರ ಸಾಕಷ್ಟು ಚರ್ಚೆಗೊಳಪಟ್ಟು, ಕಡೆಗೆ ನ್ಯಾಯಾಂಗ ಹೋರಾಟದಲ್ಲಿ ರಾಜ್ಯ ಸರ್ಕಾರ ಸೋಲುಂಡ ವಿಚಾರ ಗೊತ್ತಿರುವಂಥದ್ದೇ. ಈ ಬೆಳವಣಿಗೆ ಕನ್ನಡದ ಮಟ್ಟಿಗೆ ತೀವ್ರ ಹಿನ್ನಡೆ ಎಂದೇ ವಿಶ್ಲೇಷಿಸಲಾಯಿತು. ಆದರೆ ‘ಇದೊಂದು ತಾತ್ಕಾಲಿಕ ಸೋಲು. ಭಾಷಾಮಾಧ್ಯಮ ವಿಚಾರದಲ್ಲಿ ಮುಂದೆ ನಮಗೆ ಗೆಲುವು ಸಿಗಲಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯೋತ್ಸವದ ಸಂದರ್ಭದಲ್ಲಿ ನಾಡಿನ ಜನತೆಗೆ ಭರವಸೆ ನೀಡಿದ್ದಾರೆ. ಹಾಗೆ ಆದರೆ ಒಳ್ಳೆಯದೇ. ಆದರೆ, ಇದು ಬರೀ ನವೆಂಬರ್ ತಿಂಗಳ (ರಾಜ್ಯೋತ್ಸವ) ಉತ್ಸಾಹದ ಮಾತಾಗಿ ಹೊಮ್ಮಿ ಮತ್ತೆ ಶೈತ್ಯಾಗಾರಕ್ಕೆ ಸೇರಬಾರದು ಎಂಬುದೇ ಕಳಕಳಿ.
ಮಾತೃಭಾಷೆಯನ್ನು ಶಿಕ್ಷಣ ಮಾಧ್ಯಮವನ್ನಾಗಿಸಲು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ನಿರಾಕರಿಸಿತಲ್ಲದೆ, ಈ ಸಂಬಂಧ ರಾಜ್ಯ ಸರ್ಕಾರದ ಅರ್ಜಿಯನ್ನೂ ತಿರಸ್ಕೃತಗೊಳಿಸಿತ್ತು. ಬಳಿಕ, ಹಲವು ಸಾಹಿತಿಗಳು, ಚಿಂತಕರೆಲ್ಲ ಸೇರಿ ಮಾತೃಭಾಷೆ ಬದಲು ರಾಜ್ಯಭಾಷೆಯನ್ನು ಶಿಕ್ಷಣ ಮಾಧ್ಯಮವಾಗಿಸುವ ಹೊಸ ಪ್ರಸ್ತಾವನೆ ಸಲ್ಲಿಸಬಹುದು ಎಂಬ ಸಲಹೆಯನ್ನು ರಾಜ್ಯ ಸರ್ಕಾರಕ್ಕೆ ನೀಡಿದ್ದರು. ಕೇಂದ್ರ ಸರ್ಕಾರ 2016ರ ಜನವರಿಯಿಂದ ಹೊಸ ಶಿಕ್ಷಣ ನೀತಿ ಜಾರಿ ಮಾಡಲು ಹೊರಟಿದ್ದು, ಈ ಸಂಬಂಧ ರಾಜ್ಯ ಸರ್ಕಾರಗಳ ಅಭಿಪ್ರಾಯ, ಸಲಹೆಗಳನ್ನು ಕೇಳಿದೆ. ಅದರನ್ವಯ, ನವೆಂಬರ್ ಮಾಸಾಂತ್ಯದಲ್ಲಿ ವರದಿ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿರುವ ರಾಜ್ಯ ಸರ್ಕಾರ ಅಖಿಲ ಭಾರತ ಶಿಕ್ಷಣ ನೀತಿಯನ್ನು ಜಾರಿಗೊಳಿಸುವ ವೇಳೆ ರಾಜ್ಯಭಾಷೆಯನ್ನು ಶಿಕ್ಷಣ ಮಾಧ್ಯಮವಾಗಿ ಕಡ್ಡಾಯಗೊಳಿಸುವ ಕಾಯ್ದೆಗೆ ತಿದ್ದುಪಡಿ ತರುವಂತೆ ಆಗ್ರಹಿಸಿದೆ. ಈ ಸಂಬಂಧ ಕೇಂದ್ರ ಸರ್ಕಾರದ ಮೇಲೆ ಒತ್ತಡವನ್ನೂ ಹೇರಲಾಗುವುದು ಎಂದು ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಹೇಳಿದ್ದಾರೆ.
ಭಾಷಾಮಾಧ್ಯಮದ ವಿಷಯದಲ್ಲಿ ಕೇವಲ ಹೇಳಿಕೆಗಳಿಂದ ಕೆಲಸ ಆಗದು ಎಂಬುದನ್ನೂ ರಾಜ್ಯ ಸರ್ಕಾರ ಹಾಗೂ ಇತರೆ ಜನಪ್ರತಿನಿಧಿಗಳು ಅರ್ಥಮಾಡಿಕೊಳ್ಳಬೇಕಿದೆ. ‘ಈ ಸಂಬಂಧ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆಯಲಾಗುವುದು, ಮುಖ್ಯಮಂತ್ರಿಗಳ ನಿಯೋಗವನ್ನು ಪ್ರಧಾನಿ ಬಳಿಗೆ ಕರೆದೊಯ್ಯಲಾಗುವುದು’ ಎಂದೆಲ್ಲ ಹೇಳಿದ್ದ ಮುಖ್ಯಮಂತ್ರಿಗಳು ಈ ಪೈಕಿ ಯಾವುದನ್ನೂ ಕಾರ್ಯರೂಪಕ್ಕೆ ತಂದಿಲ್ಲ ಎಂಬುದು ವಾಸ್ತವ. ಇಲ್ಲಿ ಮತ್ತೊಂದು ಮಗ್ಗಲನ್ನು ಗಮನಿಸಬೇಕು. ರಾಜ್ಯಭಾಷೆಯನ್ನು ಕಡ್ಡಾಯವಾಗಿ ಶಿಕ್ಷಣ ಮಾಧ್ಯಮವಾಗಿಸಬೇಕಾದರೆ ಆ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಾನೂನಿಗೆ ಸೂಕ್ತ ತಿದ್ದುಪಡಿ ತರಬೇಕು. ಹಾಗಾಗಿ, ಇದು ಕೇವಲ ರಾಜ್ಯ ಸರ್ಕಾರದ್ದಷ್ಟೇ ಜವಾಬ್ದಾರಿಯಲ್ಲ. ಕೇಂದ್ರದ ಮೇಲೆ ಒತ್ತಡ ತರಲು ರಾಜ್ಯದ ಎಲ್ಲ ಸಂಸದರೂ ಕಾರ್ಯೋನ್ಮುಖರಾಗಬೇಕಿದೆ. ಈ ವಿಷಯದಲ್ಲಾದರೂ ರಾಜಕೀಯ, ಪಕ್ಷಭೇದವನ್ನು ಬದಿಗಿಟ್ಟು ಕೆಲಸ ಮಾಡಿದರೆ ಸಕಾರಾತ್ಮಕ ಫಲಿತಾಂಶ ಸಿಗಬಹುದೇನೋ.
ಮಗುವಿನ ಕಲಿಕೆ ಪರಿಣಾಮಕಾರಿಯಾಗಲು ಮಾತೃಭಾಷೆ ಅಥವಾ ರಾಜ್ಯಭಾಷೆಯಲ್ಲೇ ಶಿಕ್ಷಣ ನೀಡಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಇದು ಐಚ್ಛಿಕವಾಗದೆ ಕಡ್ಡಾಯವಾಗಬೇಕು. ಈ ಹಿಂದೆ ಸುಪ್ರೀಂ ಕೋರ್ಟ್​ನಲ್ಲಿ ಆದ ಸೋಲಿಗೆ ಹಲವು ಕಾರಣಗಳನ್ನು ನೀಡಲಾಯಿತಾದರೂ ಕೇಂದ್ರವು ಈಗ ಹೊಸ ಶಿಕ್ಷಣ ನೀತಿ ರೂಪಿಸುತ್ತಿರುವ ಹಿನ್ನೆಲೆಯಲ್ಲಿ ಈ ಹಿಂದಿನ ಪ್ರಮಾದಗಳನ್ನು ತಿದ್ದಿಕೊಳ್ಳಲು ರಾಜ್ಯ ಸರ್ಕಾರಕ್ಕೆ ಅವಕಾಶವಿದೆ. ಮುಖ್ಯವಾಗಿ, ಶಿಕ್ಷಣ ಮಾಧ್ಯಮದಲ್ಲಿ ರಾಜ್ಯಭಾಷೆ ಕಡ್ಡಾಯಗೊಳಿಸುವ ವಿಚಾರ ಕೇವಲ ಕರ್ನಾಟಕಕ್ಕೆ ಸಂಬಂಧಿಸಿದ್ದಲ್ಲ. ಇತರೆ ಬಹುತೇಕ ರಾಜ್ಯಗಳು ಇದೇ ಸಮಸ್ಯೆಯನ್ನು ಎದುರಿಸುತ್ತಿವೆ. ಆದ್ದರಿಂದ ಸಿಎಂ ಸಿದ್ದರಾಮಯ್ಯನವರು ಈ ಹಿಂದೆ ಹೇಳಿದಂತೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು, ರ್ಚಚಿಸಿ ಬಳಿಕ ನಿಯೋಗವನ್ನು ಪ್ರಧಾನಿ ಬಳಿಗೆ ಕೊಂಡೊಯ್ಯುವುದು ಸೂಕ್ತ ನಿರ್ಧಾರ. ಇದಕ್ಕಾಗಿ ರಾಜಕೀಯ ಐಕ್ಯತೆ, ಪ್ರಬಲ ಇಚ್ಛಾಶಕ್ತಿ ಬೇಕಷ್ಟೇ.

Friday, 30 October 2015

ಕನ್ನಡ ಭಾಷೆಯ ಬಗ್ಗೆ ಒಂದಷ್ಟು ಮಾಹಿತಿ.

ಸರ್ವರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.

��ಕನ್ನಡದ ಬಗ್ಗೆ ��

✅ಕನ್ನಡ ಪ್ರಪಂಚದಲ್ಲಿಯೇ ಹಳೆಯ ಪ್ರಾಚೀನ ಭಾಷೆಗಳಲ್ಲಿ ಒಂದು.

✅ ಕನ್ನಡಕ್ಕೆ ೨೦೦೦ ಸಾವಿರ ವರ್ಷಗಳಷ್ಟು ಸುದೀರ್ಘ ಇತಿಜಾಸವಿದೆ
    
✅ ಕನ್ನಡ ಪ್ರತಿಶತ ೯೯.೯೯ ರಷ್ಟು ವೈಜ್ಞಾನಿಕ ಹಾಗು ತರ್ಕಬದ್ಧವಾದ ಭಾಷೆ.
    
✅ಕನ್ನಡಕ್ಕೆ ಇದುವರೆಗೂ ಸಂದಿರುವುದು 8 ಜ್ಞಾನಪೀಠ ಪ್ರಶಸ್ತಿಗಳು. (ಬೇರೆಯವುಗಳಿಗೆ ಹೋಲಿಸಿದರೆ ಹಿಂದಿ - ೬, ತೆಲಗು - ೨, ಮಲಯಾಳಂ - ೩, ತಮಿಳು - ೨)
   
✅ ಶ್ರೀಯುತ ವಿನೋಭಾ ಭಾವೆ ಅವರು  ಕನ್ಡಡವನ್ನು 'ವಿಶ್ವ ಲಿಪಿಗಳ ರಾಣಿ' ಎಂದು ಹೊಗಳಿದ್ದಾರೆ.

✅ಅಷ್ಟೆಲ್ಲಾ ಹೊಗಳುವ ಇಂಗ್ಲೀಷ್'ಗೆ ತನ್ನದೇ ಆದ ಲಿಪಿ ಇಲ್ಲ. ಅದನ್ನೂ ರೋಮ್'ನಲ್ಲಿ ಬರೆಯಲಾಗುತ್ತದೆ.
   
✅ ಅಷ್ಟೆಲ್ಲಾ ಹೇಳಿಸಿಕೊಳ್ಳುವ ಹಿಂದಿಗೂ ಕೂಡ ತನ್ನದೇ ಆದ ಲಿಪಿ ಇಲ್ಲ. ಅದನ್ನೂ ಪ್ರಾಚೀನ ದೇವನಾಗರಿ ಲಿಪಿಯಲ್ಲಿ ಬರೆಯಲಾಗುತ್ತದೆ.
   
✅ ತಮಿಳು ತನ್ನದೇ ಆದ ಲಿಪಿ ಹೊಂದಿದ್ದರೂ ತರ್ಕಬದ್ದವಾಗಿಲ್ಲ. ಕೆಲವು ಅಕ್ಷರಗಳನ್ನು ಬೇರೆಬೇರೆ ರೀತಿಯಾಗಿ ಉಚ್ಚರಿಸಲಾಗುತ್ತದೆ.
   
✅ ಕ್ರಿಸ್ತ ಶಕ ೪೫೦ ರಲ್ಲಿ ರಚಿತವಾದ ಕನ್ನಡ ಮೊಟ್ಟ ಮೊದಲ ಶಾಸನ ಹನ್ಮಿಡಿ ಶಾಸನ (ಹಲ್ಮಿಡಿ ಶಾಸನವೆಂದು ಪ್ರಸಿದ್ದಿ)
   
✅ಕನ್ನಡದ ಬಗೆಗಿನ ಪ್ರಾಚೀನ ಬರಹ ದಾಖಲೆ ಎಂದರೆ ಅಶೋಕನ ಬ್ರಹ್ಮಗಿರಿ ಶಾಸನ (ಕ್ರಿಸ್ತಪೂರ್ವ ೨೩೦)
   
✅ ಕನ್ನಡ ಎರಡು ಸಾವಿರ ಹಳೆಯದಷ್ಟೇ ಅಲ್ಲ, ನೀವು ಮಾತಡುವದನ್ನ ಬರೆಯಬಹುದು, ಬರೆದುದ್ದನ್ನ ಓದಬಹುದಾದ ಭಾಷೆ. ಈ ವಿಶಿಷ್ಟತೆ ಹಲವಾರು ಭಾಷೆಗಳಲ್ಲಿ ಇಲ್ಲ.
   
✅ಯಾವಾಗ ಕವಿರಾಜಮಾರ್ಗದಲ್ಲಿ 'ಕಾವೇರಿಯಿಂದ ಗೋದಾವರಿವರೆಗಿರ್ಪ' ಅಂಥ ಹೇಳಿದಾಗ ಇಂಗ್ಲೀಷ್ ಇನ್ನು ತೊಟ್ಟಿಲಲ್ಲಿತ್ತು , ಹಿಂದಿಯ ಜನನವೇ ಆಗಿರಲಿಲ್ಲ.
   
✅ 'ಕುರಿತೋದದೆಯಂ ಕಾವ್ಯ ಪ್ರಯೋಗ ಪರಿಣಿತ ಮತಿಗಳ್ ಈ ಕನ್ನಡಿಗರ್' (ಯಾವುದನ್ನು ಕುರಿತು ಓದದ ಅವಿದ್ಯವಮ್ಥರು ಕಾವ್ಯ ಬರೆದು ಪ್ರಯೋಗ ಮಾಡುವಷ್ಟು ಬುದ್ದಿವಂತರು ಈ ಕನ್ನಡಿಗರು) ಎಂಬ ಕನ್ನಡಿಗರ ಬಗೆಗಿನ ಈ ಮಾತನ್ನು ಸಾವಿರ ವರ್ಷಗಳ ಹಿಂದೆಯೇ ಅಮೋಘವರ್ಶನ ಕವಿರಾಜಮಾರ್ಗದಲ್ಲಿಯೇ ಹೇಳಲಾಗಿದೆ.
   
✅ ವಿದೇಶಿಯನೊಬ್ಬನಿಂದ ಶಬ್ದಕೋಶದ ರಚನೆಯಾಗಿರುವುದು ಕನ್ನಡದಲ್ಲಿ ಮಾತ್ರ. (ಕಿಟಲ್'ನ ಶಬ್ದಕೋಶ)
   
✅ರಗಳೆ ಸಾಹಿತ್ಯ ಎಂಬುದು ಕನ್ನಡಲ್ಲಿ ಮಾತ್ರ ಕಾಣಬಹುದಾದ ವಿಶಿಷ್ಟ ಹಾಗು ಅಪರೂಪವಾದ ಸಾಹಿತ್ಯವಾಗಿದೆ.
   
✅ಕುವೆಂಪು ಪಡೆದಿರುವ ಸಾಹಿತ್ಯ ಪ್ರಶಸ್ತಿಗಳನ್ನು ಬೇರಾವ ಭಾರತೀಯ ಸಾಹಿತಿಯೂ ಪಡೆದಿಲ್ಲ.

✅ ಚಂದಸ್ಸು(ಷಟ್ಪದಿ)ನ್ನು ಬೇರಾವ ಭಾಷೆಯಲ್ಲಿ ನೀವು ಕಾಣಲಾರಿರಿ.

��ಕನ್ನಡಿಗರಾಗಿ ಹುಟ್ಟಿದ್ದಕ್ಕೆ ಹೆಮ್ಮೆ ಪಡೋಣ

ಇಂಗ್ಲಿಷ ಕಲಿಯಿರಿ ಆದರೆ ಕನ್ನಡ ಮರೆಯದಿರಿ

��ಸಿರಿಗನ್ನಡಂಗೆಲ್ಗೆ��

*************************************

About Kannada Language:

��Kannada is the third oldest language of World. (After . . . Sanskrit & Greek)
is as old as 2000 years.

��Kannada is 99.99% perfect -logically and scientifically.

��Kannadaigas got 8 Gnana Peetha Awards. Look at other languages . . . Hindi -- 6, Telugu - 2, Malayalam - 3, Tamil - 2.

��Shri VINOBA BHAVE called Kannada script as QUEEN OF WORLD SCRIPTS - "Vishwa LipigaLa RaaNi - Kannada "

��So called International language -- English does not have its own Script. English is written in "ROMAN"

��So called National Language -- Hindi does not have its own script. Hindi is written in "Deva nagari"

��Though Tamil has a script, logically it is imperfect -- as common letters are used for many pronunciations..

��Kannada is as old as 2000 years. You can write what you speak and you can read what you write.

��When " Kaviraja Maarga was written . . ."kaaveriyinda , godaavarivaregirpa ... " by Amogha Varsha Nripathunga, English was incradle & Hindi was not born at all.

��Kannada is the only Indian language for which a foreigner (Kittal) wrote a dictionary (Shabda Kosha)

��Ragale Saahithya can be seen only in Kannada which is of a rare and different kind of literature.

��Number of literature awards KUVEMPU got, was highest among any Indian authors.

��Kannada Chandassu (shatpadis) out pared all other languages.

So Let us have PRIDE in using Kannada . Be proud of being a KANNADIGA.

Forward this to all your friends and let them also be PROUD to be KANNADIGAS.

Monday, 26 October 2015

ಮಹರ್ಷಿ ವಾಲ್ಮೀಕಿ ಜಯಂತಿ ವಿಶೇಷ.

ಸರ್ವರಿಗೂ ಮಹರ್ಷಿ ವಾಲ್ಮೀಕಿ ಜಯಂತಿಯ ಶುಭಾಶಯಗಳು.

ಮಹರ್ಷಿ ವಾಲ್ಮೀಕಿ.
*************
ಒಬ್ಬ ವ್ಯಕ್ತಿ ನಮಗೆ ಮಹಾನ್ ಎಂದೆನಿಸಿದಾಗ ನಾವು ಕೇವಲ ಅವರ ಹಿಂಬಾಲಕರಾಗಿರುತ್ತೇವೆ. ಆ ಮಹಾನ್ ವ್ಯಕ್ತಿಯ ಕಾರ್ಯವನ್ನು ಅಭ್ಯಸಿ ಅಲ್ಲಿನ ಮೌಲ್ಯಗಳನ್ನು ಅರಿತುಕೊಂಡಾಗ ಪುನೀತರಾಗುತ್ತೇವೆ. ವಾಲ್ಮೀಕಿ ಮರ್ಹರ್ಷಿಗಳು ರಚಿಸಿದ ರಾಮಾಯಣವು ಆದಿಕಾವ್ಯವೆನಿಸಿದೆ. ಹಲವಾರು ರಾಮಾಯಣಗಳು ಕಾಲಾನುಕ್ರಮದಲ್ಲಿ ರಚಿತವಾಗಿದ್ದರೂ ಇವೆಲ್ಲವೂ ವಾಲ್ಮೀಕಿ ರಾಮಾಯಣವನ್ನೇ ಅನುಸರಿಸಿ ಬಂದಂತಹವು. ಯಾವುದೇ ಕವಿ ರಾಮಾಯಣವನ್ನು ಬರೆಯುವಾಗಲೂ ವಾಲ್ಮೀಕಿಯನ್ನು ಅನುಸರಿಸದೆ ಇಲ್ಲ.

ವಾಲ್ಮೀಕಿ ಮಹರ್ಷಿಗಳಾಗುವುದಕ್ಕೆ ಮುಂಚಿನ ಬದುಕಿನ ಬಗ್ಗೆ ಒಂದು ಐತಿಹ್ಯವಿದೆ. ಅವರ ಮೊದಲ ಹೆಸರು ರತ್ನಾಕರ ಎಂದಿತ್ತು. ಈ ರತ್ನಾಕರ ಒಳ್ಳೆಯ ಮನೆತನದಲ್ಲಿ ಜನಿಸಿದ್ದನಾದರೂ ದರೋಡೆಕೋರರ ಸಂಸರ್ಗದಲ್ಲಿ ಇದ್ದುದರಿಂದ ದರೋಡೆ, ಕೊಲೆಗಳನ್ನು ಮಾಡತೊಡಗಿದ್ದನು. ಇದೇ ಆತನ ಜೀವನ ನಿರ್ವಾಹದ ಕಸುಬೂ ಆಗಿಹೋಗಿತ್ತು. ಒಂದು ದಿನ ರತ್ನಾಕರನ ಎದುರಿಗೆ ನಡೆದು ಬಂದವರು ದೇವಋಷಿ ನಾರದರು. ರತ್ನಾಕರ ನಾರದರಿಗೆ ಹೇಳಿದನು – “ನಿನ್ನಲ್ಲಿ ಇದ್ದುದೆಲ್ಲವನ್ನು ನನಗೆ ಕೊಟ್ಟುಬಿಡು. ಇಲ್ಲದಿದ್ದರೆ ಪ್ರಾಣವನ್ನು ಕಳೆದುಕೊಳ್ಳುತ್ತೀಯೆ!”

ನಾರದರು ನುಡಿದರು - “ನನ್ನ ಬಳಿ ಈ ವೀಣೆ ಮತ್ತು ತೊಟ್ಟ ವಸ್ತ್ರಗಳ ಹೊರತಾಗಿ ಇನ್ನೇನೂ ಇಲ್ಲ. ನಿನಗೆ ಬೇಕಿದ್ದರೆ ತೆಗೆದುಕೊಳ್ಳಬಹುದು. ಆದರೆ ನೀನು ಇಂತಹ ಕ್ರೂರಕರ್ಮವನ್ನು ಮಾಡಿ ಭಯಂಕರವಾದ ಪಾಪವನ್ನು ಏಕೆ ಮಾಡುತ್ತಿರುವೆ?”. ದೇವರ್ಷಿಗಳ ಕೋಮಲವಾದ ಮಾತಿನಲ್ಲಿ ಅದೆಂತದ್ದೋ ಮೋಡಿಯಿತ್ತು. ರತ್ನಾಕರನಾದರೋ ಇಂತಹ ಸುಮನೋಹರ ಧ್ವನಿಯನ್ನು ಎಂದೂ ಕೇಳಿದ್ದೇ ಇಲ್ಲ! ಈ ಸಂವೇದನೆಯಲ್ಲಿ ಆತನ ಕಠೋರ ಹೃದಯ ಕರಗಿತು. ಅವನು ಹೇಳಿದನು – “ಸ್ವಾಮಿ! ಪಾಪ ಎಂದರೇನು? ನನಗೆ ಜೀವನಕ್ಕೆ ಇದೇ ಸಾಧನೆಯಾಗಿದೆ. ಇದರಿಂದಲೇ ನಾನು ನನ್ನ ಪರಿವಾರವನ್ನು ಸಾಕುತ್ತಿರುವುದು.”

ನಾರದರು ಹೇಳಿದರು – “ನೀನು ಮೊದಲಿಗೆ ಮನೆಗೆ ಹೋಗಿ ‘ನಿನ್ನ ಪರಿವಾರದವರು ನಿನ್ನಿಂದ ಕೇವಲ ಸಾಕಲ್ಪಡಲು ಮಾತ್ರ ಅಧಿಕಾರಿಗಳಾಗಿರುವರೋ, ಅಥವಾ ನಿನ್ನ ಪಾಪದಲ್ಲಿಯೂ ಸಹಭಾಗಿಗಳಾಗಿರುವರೋ’ ಎಂದು ಕೇಳಿ ಬಾ, ನೀನು ಮರಳಿ ಬರುವವರೆಗೆ ನಾನು ಇಲ್ಲೇ ಇರುವೆನು. ಎಲ್ಲಿಗೂ ಹೋಗುವುದಿಲ್ಲ. ನಿನಗೆ ನಂಬಿಕೆ ಇಲ್ಲದಿದ್ದರೆ ನನ್ನನ್ನು ಒಂದು ಮರಕ್ಕೆ ಕಟ್ಟಿಹಾಕು.”

ರತ್ನಾಕರನು ನಾರದರನ್ನು ಕಟ್ಟಿಹಾಕಿ ತನ್ನ ಮನೆಗೆ ಹೋದನು. ಅವನು ತನ್ನ ಕುಟುಂಬದವರನ್ನೆಲ್ಲಾ ಕೇಳಿದನು – “ನೀವೆಲ್ಲರೂ ನನ್ನ ಪಾಪದಲ್ಲಿ ಭಾಗಿಗಳಾಗುವಿರೋ, ಅಥವಾ ಕೇವಲ ನನ್ನ ಸಂಪತ್ತಿಗೆ ಪಾಲುದಾರರೋ?” ಅವರೆಲ್ಲರೂ ಹೇಳಿದ್ದು ಹೆಚ್ಚೂ ಕಡಿಮೆ ಒಂದೇ ರೀತಿಯಲ್ಲಿತ್ತು – “ಒಡಲ ಹೊರುವುದು ಗೊತ್ತು, ಪಾಪ ನಿಮ್ಮಯ ಸೊತ್ತು”. ನೀನು ಯಾವ ರೀತಿಯಿಂದ ಧನವನ್ನು ತರುವೆಯೋ ಅದು ನಿನಗೆ ಗೊತ್ತು. ನಾವು ನಿನ್ನ ಪಾಪದಲ್ಲಿ ಹೇಗೆ ತಾನೇ ಪಾಲುದಾರರಾದೇವು!

ತನ್ನ ಕುಟುಂಬದವರ ಮಾತನ್ನು ಕೇಳಿ ರತ್ನಾಕರನ ಹೃದಯಕ್ಕೆ ಆಘಾತವಾಯಿತು. ಅವನ ಅರಿವಿನ ಕಣ್ಣು ತೆರೆಯಿತು. ಅವನು ಬೇಗನೇ ಕಾಡಿಗೆ ಹೋಗಿ ನಾರದರ ಬಂಧನವನ್ನು ಬಿಡಿಸಿ, ವಿಲಪಿಸುತ್ತಾ ಅವರ ಚರಣಗಳಲ್ಲಿ ಕುಸಿದುಬಿದ್ದನು. ಅವನ ಪ್ರಲಾಪದಲ್ಲಿ ಆಳವಾದ ಪಶ್ಚಾತ್ತಾಪ ತುಂಬಿತ್ತು. ನಾರದರು ಅವನಿಗೆ ಧೈರ್ಯಹೇಳಿ ರಾಮನಾಮದ ಉಪದೇಶ ನೀಡಿದರು. ಆದರೆ ಹಿಂದೆ ಮಾಡಿದ ಪಾಪಗಳಿಂದಾಗಿ ಅವನಿಗೆ ರಾಮನಾಮವನ್ನು ಉಚ್ಚರಿಸಲಾಗಲಿಲ್ಲ. ಆಗ ನಾರದರು ಯೋಚಿಸಿ ‘ಮರಾ-ಮರಾ’ ಎಂದು ಜಪಿಸಲು ಹೇಳಿದರು. ಮರ ಅವನಿಗೆ ಪರಿಚಿತವಾದ್ದರಿಂದ ಹಾಗೇ ಜಪಿಸತೊಡಗಿದನು. ಮರಾ-ಮರಾ ಎಂದು ನಿರಂತರ ಹೇಳುವುದರಿಂದ ರಾಮ-ನಾಮದ ಉಚ್ಚಾರವು ಸಹಜವಾಗೆಂಬಂತೆ ಆಯಿತು. ಇದನ್ನೇ ದಾಸರು “ಆ ಮರ ಈ ಮರ ಎಂದು ಧ್ಯಾನಿಸುವಾಗ, ರಾಮ ರಾಮ ಎಂಬ ನಾಮವೇಕಾಯಿತೋ” ಎಂದು ಹಾಡಿರುವುದು.

ನಾರದರಿಂದ ಉಪದೇಶ ಪಡೆದು ರತ್ನಾಕರನು ನಾಮಜಪದಲ್ಲಿ ಮುಳುಗಿಹೋದನು. ಹಲವಾರು ವರ್ಷಗಳವರೆಗೆ ನಾಮಜಪದ ಪ್ರಬಲ ನಿಷ್ಠೆಯಿಂದ ಅವನ ಸಮಸ್ತ ಪಾಪಗಳೂ ತೊಳೆದುಹೋದವು. ಅವನ ಶರೀರದ ಮೇಲೆ ಹುತ್ತ ಬೆಳೆಯಿತು. ಹುತ್ತಕ್ಕೆ ವಲ್ಮೀಕವೆಂದು ಹೇಳುವರು. ದೈವ ಸಾಕ್ಷಾತ್ಕಾರದಿಂದ ವಲ್ಮೀಕದಿಂದ ಹೊರಬಂದ ಕಾರಣದಿಂದ ಅವನ ಹೆಸರು ವಾಲ್ಮೀಕಿ ಎಂದಾಯಿತು.

ಮಹರ್ಷಿಗಳಾದ ವಾಲ್ಮೀಕಿಗಳು ಪ್ರಪಂಚದಲ್ಲಿ ಲೌಕಿಕ ಛಂದಸ್ಸುಗಳ ಆದಿಕವಿಗಳೇ ಆದರು. ಈ ವಾಲ್ಮೀಕಿ ಮಹರ್ಷಿಗಳು ಬ್ರಹ್ಮನ ಅನುಗ್ರಹದಿಂದ ರಾಮಾಯಣವನ್ನು ರಚಿಸಿದರು ಎಂಬುದು ಭಾರತೀಯ ನಂಬಿಕೆ. ಬ್ರಹ್ಮನ ಮಡದಿಯಾದ ವಾಗ್ದೇವಿ ತಾನಾಗಿಯೇ ವಾಲ್ಮೀಕಿಯ ನಾಲಿಗೆಯಲ್ಲಿದು ರಾಮಾಯಣವನ್ನು ಹೊರಹೊಮ್ಮಿಸಿದಳು ಎಂಬುದು ಭಕ್ತಿಪೂರ್ಣ ಭಾರತೀಯ ಭಾವವಾಗಿದೆ.

ತಮ್ಮ ಬೋಧನೆಯಿಂದ ಮಹರ್ಷಿಯಾದ ಈ ವಾಲ್ಮೀಕಿ ಮಹರ್ಷಿಗಳ ಆಶ್ರಮಕ್ಕೆ ಒಮ್ಮೆ ನಾರದರು ಆಗಮಿಸಿದರು. ಬಂದ ದೇವರ್ಷಿಗಳನ್ನು ಯಥೋಚಿತವಾಗಿ ಅರ್ಘ್ಯಪಾದ್ಯಾದಿಗಳಿಂದ ಸತ್ಕರಿಸಿದರು ವಾಲ್ಮೀಕಿ. ಸತ್ಕಾರವಾದ ಮೇಲೆ ತಪೋನಿರತರಾದ ನಾರದರನ್ನು ಮುನಿಶ್ರೇಷ್ಠರಾದ ವಾಲ್ಮೀಕಿ ಮಹರ್ಷಿಗಳು ಪ್ರಶ್ನಿಸಿದರು - “ಈ ಲೋಕದಲ್ಲಿ ಈಗ ಸಕಲ ಸದ್ಗುಣ ಸಂಪನ್ನ, ಪರಾಕ್ರಮಶಾಲಿ, ಧರ್ಮಜ್ಞ, ಸತ್ಯದ ವ್ರತ ಹಿಡಿದವನು, ಮಾಡಿದ ಸಂಕಲ್ಪವನ್ನು ಬಿಡದವನು, ಪರಂಪರೆಯಾಗಿ ಬಂದ ಸದಾಚಾರ ಸಂಪನ್ನ, ಸರ್ವ ಕಾರ್ಯ ದುರಂಧರ, ಪ್ರಿಯದರ್ಶನ, ಧೈರ್ಯಶಾಲಿ, ಕಾಂತಿಮಂತ, ಕೋಪವನ್ನು ಜಯಿಸಿದವನು, ಅಹಂಕಾರ ರಹಿತ, ಅಸೂಯೆ ಇಲ್ಲದವನು, ಯುದ್ಧಕ್ಕೆ ನಿಂತರೆ ದೇವತೆಗಳನ್ನೇ ಗೆಲ್ಲಬಲ್ಲವನು ಇದ್ದಾನೆಯೇ? ಈ ಹದಿನಾರು ಗುಣಗಳಿಂದ ಕೂಡಿದಂಥವ ಈಗ ಈ ಲೋಕದಲ್ಲಿ ಇದ್ದರೆ ದಯೆಯಿಟ್ಟು ತಿಳಿಸಿ, ನನಗೆ ಬಹಳ ಕುತೂಹಲವಾಗಿದೆ. ಸ್ವಾಮಿ, ನೀವು ಇದನ್ನು ತಿಳಿಸಲು ಸಮರ್ಥರು – ಅದಕ್ಕೇ ನಾನು ಕೇಳುತ್ತಿದ್ದೇನೆ; ದಯೆಯಿಟ್ಟು ತಿಳಿಸಿ”.

ಈ ಪ್ರಶ್ನೆಯನ್ನು ಕೇಳಿದ ನಾರದ ಸಂತೋಷದಿಂದ ವಾಲ್ಮೀಕಿಗೆ “ನೀವು ಕೇಳುವಂತೆ ಸಕಲ ಗುಣಗಳಿಂದ ಕೂಡಿದವನು ಇದ್ದಾನೆ. ಅವನೇ ಇಕ್ಷ್ವಾಕು ವಂಶದಲ್ಲಿ ಅವತರಿಸಿದ ಶ್ರೀರಾಮ” ಎಂದು ಸಂಕ್ಷೇಪವಾಗಿ ಶ್ರೀರಾಮಾವತಾರದಿಂದ ಪ್ರಾರಂಭಿಸಿ, ಸೀತಾಕಲ್ಯಾಣ, ಅರಣ್ಯಾಗಮನ, ಪಾದುಕಾ ಪ್ರದಾನ, ಸೀತಾಪಹರಣ, ಸುಗ್ರೀವ ಸಖ್ಯ, ಸೇತುಬಂಧ, ರಾವಾಣಾಧಿಗಳ ನಿಗ್ರಹ, ಅಯೋಧ್ಯೆಯಲ್ಲಿ ಪಟ್ಟಾಭಿಷೇಕದವರೆಗೆ ಶ್ರೀರಾಮ ಕಥೆಯನ್ನು ಹೇಳಿದರು.

ರಾಮನಾಮದ ಮಹಿಮೆಯಿಂದಲೇ ಮಹರ್ಷಿಗಳಾದ ವಾಲ್ಮೀಕಿಗಳಿಗೂ ಶ್ರೀರಾಮನ ಕಥೆಯ ಅನುಭಾವವಾಗಿತ್ತು. ತಮಗೆ ತಿಳಿದಿರುವುದನ್ನು ಚೆನ್ನಾಗಿ ಮನದಟ್ಟು ಮಾಡಿಕೊಳ್ಳುವ ಸಲುವಾಗಿಯೇ ಅವರು ನಾರದರನ್ನು ಕೇಳಿದ್ದರು.

ನಾರದರು ಹೊರಟು ಹೋದಮೇಲೆ ವಾಲ್ಮೀಕಿ ಮಹರ್ಷಿಗಳು ಸ್ನಾನ ಮಾಡಲು ಶಿಷ್ಯನಾದ ಭಾರದ್ವಾಜನೊಡನೆ ತಮಸಾನದೀ ತೀರಕ್ಕೆ ಬರುತ್ತಾರೆ. ನದೀ ತೀರದ ದೃಶ್ಯ ಸುಮನೋಹರವಾಗಿದೆ. ನದಿಯ ನೀರು ಸತ್ಪುರುಷರ ಮನಸ್ಸಿನಂತೆ ತಿಳಿಯಾಗಿದೆ. ಸತ್ಪುರುಷರ ಮನಸ್ಸು ಯಾವಾಗಲೂ ತಿಳಿಯಾಗಿರುತ್ತದೆ. ಅಂತೆಯೇ ಸರೋವರದ ಜಲವೂ ಸ್ಪಟಿಕದಂತೆ ಶುಭ್ರವಾಗಿ ತಿಳಿಯಾಗಿರುವುದನ್ನು ಕಂಡು ವಾಲ್ಮೀಕಿ ಸಂತೋಷ ಪಡುತ್ತಾರೆ. ಸುತ್ತಲೂ ತಿರುಗಿ ಪ್ರಕೃತಿ ಸೌಂದರ್ಯವನ್ನು ನೋಡತೊಡಗುತ್ತಾರೆ.

ಆ ಸಮಯದಲ್ಲಿ ಯಾವನೋ ಒಬ್ಬ ಬೇಡ ಮರದ ಮೇಲೆ ಸಂತೋಷದಿಂದ ಕುಳಿತಿದ್ದ ಕ್ರೌಂಚ ಪಕ್ಷಿಗಳಲ್ಲಿ ಗಂಡು ಹಕ್ಕಿಯನ್ನು ತನ್ನ ಬಾಣದಿಂದ ಹೊಡೆದು ಹಾಕುತ್ತಾನೆ. ಗಂಡು ಹಕ್ಕಿ ಕೆಳಗುರುಳಿದಾಗ ಅದನ್ನು ಕಂಡು ಹೆಣ್ಣು ಹಕ್ಕಿ ವಿಲಪಿಸುತ್ತದೆ. ಈ ದೃಶ್ಯವನ್ನು ಕಂಡು ವಾಲ್ಮೀಕಿ ಮಹರ್ಷಿಗಳಿಗೆ ಸಂಕಟವಾಗಿ ಕೋಪ ಬರುತ್ತದೆ. ಕೋಪದ ಭರದಲ್ಲಿ “ಹೇ ನಿಷಾದ! ಕಾಮಮೋಹಿತವಾಗಿರುವ ಈ ಪಕ್ಷಿದ್ವಯರಲ್ಲಿ ಗಂಡು ಹಕ್ಕಿಯನ್ನು ಕೊಂದೆಯಾದ ಕಾರಣ ನೀನು ಬಹುಕಾಲ ಬದುಕುವುದು ಬೇಡ” ಎಂದು ಶಪಿಸುತ್ತಾರೆ.

ಶಪಿಸಿದ ನಂತರ ಜಿತಕ್ರೋಧರಾಗಿರಬೇಕಾದ ತಮ್ಮಿಂದ ಶಾಪ ಹೊರಹೊಮ್ಮಿತಲ್ಲಾ ಎಂದು ಕಳವಳ ಪಡುತ್ತಾರೆ. ಸ್ನಾನ-ಅಹ್ನೀಕಗಳನ್ನು ಮುಗಿಸಿಕೊಂಡು ಆಶ್ರಮಕ್ಕೆ ಬಂದು ತಾವು ಹೇಳಿದ ಶ್ಲೋಕವನ್ನೇ ಮತ್ತೆ ಮತ್ತೆ ಧ್ಯಾನಿಸತೊಡಗುತ್ತಾರೆ. ಅದೇ ಸಮಯಕ್ಕೆ ಬ್ರಹ್ಮದೇವರು ವಾಲ್ಮೀಕಿಯ ಬಳಿ ಬರುತ್ತಾರೆ.

ಚಿಂತಾಕ್ರಾಂತರಾಗಿರುವ ಋಷಿವರ್ಯರನ್ನು ಕಂಡು “ಚಿಂತಿಸುವ ಕಾರಣವಿಲ್ಲ. ನಿಮ್ಮ ಬಾಯಿಂದ ಸಾಕ್ಷಾತ್ ವಾಣಿಯೇ ಆ ಶ್ಲೋಕವನ್ನು ನುಡಿಸಿದ್ದಾಳೆ. ಇದು ನೀವು ರಚಿಸುವ 24,000 ಶ್ಲೋಕವುಳ್ಳ ರಾಮಾಯಣ ಕಾವ್ಯಕ್ಕೆ ನಾಂದೀ ಶ್ಲೋಕವಾಗಿ, ಮಂಗಳ ಶ್ಲೋಕವಾಗಿ ಪರಿಣಮಿಸುತ್ತದೆ” ಎಂದು ನುಡಿದರು.

ವಾಲ್ಮೀಕಿ ಮಹರ್ಷಿಗಳ ಬಾಯಿಂದ ಹೊರಟ ಶ್ಲೋಕವಾದರೋ ಹೀಗಿತ್ತು.
“ಮಾ ನಿಷಾದ ಪ್ರತಿಪ್ಠಾತ್ವಂ ಆಗಮಃ ಶಾಶ್ವತೀಃ ಸಮಾಃ|
ಯತ್ಕ್ರೌಂಚ ಮಿಥುನಾದೇಕಂ ಅವಧೀಹ್ ಕಾಮಮೋಹಿತಂ||”

“ಎಲೈ ನಿಷಾದನೇ, ಕಾಮಮೋಹಿತವಾಗಿರುವ ಕ್ರೌಂಚ ದಂಪತಿಗಳಲ್ಲಿ ಒಂದನ್ನು ನೀನು ಅಸಮಯದಲ್ಲಿ ಕೊಂದೆಯಾದ್ದರಿಂದ ನೀನು ಬಹಳ ಕಾಲ ಬದುಕದಂಥ ಸ್ಥಿತಿಯನ್ನು ಪಡೆ.” ಮೇಲ್ನೋಟಕ್ಕೆ ತೋರಿ ಬರುವ ಅರ್ಥ ಇದು. ಈ ಶ್ಲೋಕ ಶಾಪರೂಪವಾಗಿ ಹೊರಬಂದಿತು. ಆದರೆ ಅದು ಶಾಪವಾಗಿರದೆ ತಂತ್ರೀಲಯಗಳಿಂದ ಒಡಗೂಡಿ ಪ್ರಾಸಬದ್ಧ, ಛಂದೋಬದ್ಧವಾದ ಶ್ಲೋಕವಾಗಿ ಹೊರಹೊಮ್ಮಿದ್ದನ್ನು ಕಂಡು ವಾಲ್ಮೀಕಿಗೇ ಅಚ್ಚರಿಯಾಗುತ್ತದೆ”

ಅದನ್ನೇ ಬ್ರಹ್ಮ ವಾಲ್ಮೀಕಿಗೆ ಸಮಾಧಾನ ಮಾಡುತ್ತಾ “ಇದು ಮಂಗಳ ಶ್ಲೋಕ ಎಂದು ಹೇಳಿದ್ದು. ಈ ಶ್ಲೋಕಕ್ಕೆ ಅನೇಕ ಜ್ಞಾನಿಗಳು ವ್ಯಾಖ್ಯಾನ ಮಾಡಿದ್ದಾರೆ. “ಮಾ” ಶಬ್ದ ಲಕ್ಷ್ಮಿಗೆ ಅನ್ವಯಿಸುತ್ತದೆ. ಲಕ್ಮೀಸಮೇತ ನಾರಾಯಣ ಸ್ವರೂಪ ಶ್ರೀರಾಮ, ಕಾಮಮೋಹಿತವಾಗಿದ್ದ ಕ್ರೌಂಚ ಪಕ್ಷಿಯನ್ನು ಕೊಂದೆಯಾದ್ದರಿಂದ ನೀನು “ಶಾಶ್ವತೀ ಸಮಾಃ” ಅಂದರೆ “ಶಾಶ್ವತವಾಗಿ ಬಾಳುವವನಾಗು” ಎಂದು. ಅದುವರೆಗೆ ತಾವು ಕೇಳಿದ ರಾಮಾಯಣ ಕಥಾನಾಯಕ ಶ್ರೀರಾಮನನ್ನು ಕುರಿತು, ಮಂಗಳಾಶೀರ್ವಾದ ಮಾಡುತ್ತಿರುವ ಶ್ಲೋಕವಾಗಿದೆ ಇದು.

ಕ್ರೌಂಚಪಕ್ಷಿಗಳೇ ರಾವಣ ಮಂಡೋದರಿಯ ಪ್ರತೀಕ. ಆ ಬೇಡನೇ ಶ್ರೀರಾಮ. ಕಾಮ ಮೋಹಿತವಾದ ಕ್ರೌಂಚ ಪಕ್ಷಿ ಎಂದರೆ ಕಾಮಿಯಾದ ರಾವಣ ಎಂದರ್ಥ. ಅಂಥ ಕ್ರೌಂಚ ಪಕ್ಷಿಯ ಹೊಡೆದ ಬೇಡನೇ ಶ್ರೀರಾಮ. “ರಾವಣನಿಗ್ರಹ ಮಾಡಿದ ರಾಮ! ನೀನು ಶಾಶ್ವತವಾಗಿ ಬಾಳುವಂಥವನಾಗು” ಎಂದು ರಾಮನಿಗೆ ಮಂಗಳಾಶೀರ್ವಾದ ಮಾಡುವ ಶ್ಲೋಕ ಇದು.

“ರಹಸ್ಯ ಚ ಪ್ರಕಾಶಂ ಚ ಯದ್ವ್ರತ್ತಂ ತಸ್ಯ ಧೀಮತಃ” ಎಂಬುದಾಗಿ ಬ್ರಹ್ಮದೇವರು ವಾಲ್ಮೀಕಿಯನ್ನು ಅನುಗ್ರಹಿಸಿದರಂತೆ

“ನಿನಗೆ ರಾಮಾಯಣದಲ್ಲಿನ ಸೂಕ್ಷ್ಮಾತಿಸೂಕ್ಷ್ಮ ದೃಶ್ಯಗಳು – ಅವು ರಹಸ್ಯವೇ ಆದರೂ –ವೇದ್ಯವಾಗಲೀ” ಎಂದು ಬ್ರಹ್ಮರು ವಾಲ್ಮೀಕಿಯನ್ನು ಹರಸಿ ತಮ್ಮ ಸ್ವಸ್ಥಾನಕ್ಕೆ ಹಿಂದಿರುಗಿದರು. ಬ್ರಹ್ಮ ದೇವರು ಹೊರಟು ಹೋದಮೇಲೆ ಧರ್ಭೆಯ ಆಸನದಲ್ಲಿ ಕುಳಿತು ವಾಲ್ಮೀಕಿ ಧ್ಯಾನಾಸಕ್ತರಾದರು. ಬ್ರಹ್ಮದೇವನ ಅನುಗ್ರಹದಿಂದ ವಾಗ್ದೇವಿಯಿಂದ ಪ್ರೇರಿತವಾಗಿ ತಮಗೆ ತಾವೇ ಎಲ್ಲಾ ದೃಶ್ಯಗಳೂ ಒಂದಾದ ಮೇಲೊಂದು ಮನಃಪಟಲದಲ್ಲಿ ಕಂಡುಬರುತ್ತಿರುವಂತೆ ವಾಲ್ಮೀಕಿ 24,000 ಶ್ಲೋಕಗಳುಳ್ಳ ಶ್ರೀಮದ್ರಾಮಾಯಣವನ್ನು ರಚಿಸಿದರು. ಇದು ಇತಿಹಾಸ – ಅಂದರೆ ನಡೆದದ್ದನ್ನು ನಡೆದಂತೆ ಹೇಳುವ ಕಾವ್ಯ ಎನಿಸಿಕೊಂಡಿತು.

ರಾಮಾಯಣದ ರಚನೆಯೇನೋ ಆಯಿತು. ಆದರೆ ಅದರ ಪ್ರಚಾರ ಹೇಗಾಗುವುದೋ ಎಂಬ ಚಿಂತೆ ವಾಲ್ಮೀಕಿ ಮಹರ್ಷಿಗಳನ್ನು ಕಾಡುತ್ತಿತ್ತು. ಆ ವೇಳೆಗೆ ಸರಿಯಾಗಿ ಚಂದ್ರ ಸೂರ್ಯರಂತೆ ಅಲ್ಲಿಗೆ ಕುಶ ಲವರು ಬಂದು ವಾಲ್ಮೀಕಿಯ ಚರಣಗಳಿಗೆ ನಮಿಸಿದರು. ರಾಮಾಯಣವನ್ನು ರಾಮನ ಕುವರರಾದ ಕುಶ ಲವರಿಗೆ ವಾಲ್ಮೀಕಿ ಉಪದೇಶಿಸಿದರು. ಅವರು ಮೊದಲು ಋಷಿಗಳ ಸಮೂಹದಲ್ಲಿ ರಾಮಾಯಣವನ್ನು ಗಾನ ಮಾಡಿದರು. ರಸಿಕರಾದ ಋಷಿಗಳೆಲ್ಲಾ ಮಧುಪಾನ ಮಾಡಿದವರಂತೆ ರಾಮಾಯಣದ ಮಧುವನ್ನು ಆಸ್ವಾದಿಸಿದರು. ತುಷ್ಟರಾದರು. ಎಲ್ಲ ಋಷಿಗಳೂ ಮುದದಿಂದ ಕುಮಾರರಿಬ್ಬರನ್ನೂ “ಚಿರಾಯುಗಳಾಗಿ” ಎಂದು ಹರಸಿದರು.

ಅಷ್ಟರಲ್ಲಿ ವಾಲ್ಮೀಕಿ ಮಹರ್ಷಿಗಳಿಗೆ ಶ್ರೀರಾಮರಿಂದ ಅಶ್ವಮೇಧ ಯಾಗಕ್ಕೆ ದಯಮಾಡಿಸುವಂತೆ ಕರೆ ಬಂದಿತು. ಆಗ ಅವರು ತಮ್ಮೊಂದಿಗೆ ಕುಶ ಲವರನ್ನೂ ಕರೆದೊಯ್ದರು. ರಾಮಾಯಣದ ಗಾನರೂಪಕ ಶ್ರೀರಾಮನ ಅಶ್ವಮೇಧ ಮಹಾಮಂಟಪದಲ್ಲಿ ಕಿಕ್ಕಿರಿದ ಜನಸ್ತೋಮದ ಇದಿರು ನಡೆಯಿತು. ಇಂದ್ರ ಅಗ್ನಿಯಂತೆ ಶೋಭಿಸುತ್ತಿರುವ ಕುಶ ಲವರು ಸುಶ್ರಾವ್ಯವಾದ ಕಂಠದೊಡನೆ ಮಧುರವಾದ ವೀಣಾನಾದ ಜೊತೆಗೂಡುತ್ತಿದ್ದಂತೆ ರಾಮಾಯಣವನ್ನು ಗಾನ ಮಾಡಿದರು. ಎಲ್ಲರೂ ಕೇಳಿ ಮೆಚ್ಚಿದರು. ಸಿಂಹಾಸನದಲ್ಲಿ ಕುಳಿತಿದ್ದ ಶ್ರೀರಾಮರು ರಾಮಾಯಣದ ಮಾಧುರ್ಯಕ್ಕೆ ಮನಸೋತವರಾಗಿ ಮೆಲ್ಲ ಮೆಲ್ಲಗೆ ತೆವಳುತ್ತಾ ಕುಶ ಲವರ ಸಮೀಪದಲ್ಲಿ ಜನಗಳ ನಡುವೆಯೇ ಬಂದು ಕುಳಿತರಂತೆ. ವಸಿಷ್ಠರು “ಇದೇನು, ರಾಮ? ನಿನ್ನ ಕಥೆಯನ್ನು ಕೇಳಲು ನೀನು ಇಷ್ಟು ಉತ್ಸುಕನಾಗಿರುವೆ” ಎನಲು, ಶ್ರೀರಾಮರು “ಇದನ್ನು ನಾನು ಮೆಚ್ಚುಗೆಯಿಂದ ಕೇಳುತ್ತಿರುವುಡು ನನ್ನ ಕಥೆ ಎಂದಲ್ಲ, ಸೀತೆಯ ಕಥೆ ಎಂದು” ಎಂದು ನುಡಿದರಂತೆ.

ಹೀಗೆ ವಾಲ್ಮೀಕಿ ಮಹರ್ಷಿಗಳ ರಾಮಾಯಣದ ಪ್ರಚಾರ ನಡೆಯಿತು. ಕುಶ ಲವರು ಶ್ರೀರಾಮನ ಸಮ್ಮುಖದಲ್ಲಿ ರಾಮಾಯಣವನ್ನು ಗಾನ ಮಾಡತೊಡಗಿದರು. ಮುಂದೆ ಅದು ಜನಪದದಲ್ಲಿ ಪ್ರವಹಿನಿಯಾಗಿ ಸಹಸ್ರಾರು ವರ್ಷಗಳಿಂದ ವಿವಿಧ ರೂಪಗಳಲ್ಲಿ, ವಿವಿಧ ಭಾಷೆಗಳಲ್ಲಿ ಹರಿಯುತ್ತಲೇ ಇದೆ. ಹೀಗೆ ಮಹರ್ಷಿ ವಾಲ್ಮೀಕಿ ಮತ್ತು ಅವರು ಮಾಡಿದ ಕೆಲಸ ಶ್ರೀರಾಮನ ಕೀರ್ತಿಯಷ್ಟೇ ಅಜರಾಮರವಾದದ್ದು. ಈ ವಾಲ್ಮೀಕಿ ಎಂಬ ಶ್ರೇಷ್ಠತೆಗೆ, ಮಹಾನ್ ಶಕ್ತಿಗೆ, ದಿವ್ಯ ಭಾರತೀಯ ಪರಂಪರೆಗೆ ಭಕ್ತಿಯಿಂದ ವಂದಿಸೋಣ.

ಧನ್ಯವಾದಗಳು.